ಕರಣ್ ನಗರ್ ಕಾರ್ಯಾಚರಣೆಯಲ್ಲಿ ಪಾಕ್ ಉಗ್ರರ ಸದೆಬಡಿದ ಮಿಲಿಟರಿ ತಂಡದಲ್ಲಿದ್ದ ದಕ್ಷಿಣ ಕನ್ನಡದ ಯೋಧರಲ್ಲಿ ಒಬ್ಬರಾದ ಸತೀಶ್ ಅವರು ಕುಲಾಲ ಸಮುದಾಯದವರಾಗಿದ್ದು ಸುರತ್ಕಲ್ ಕೃಷ್ಣಾಪುರದವರು.
ಮಂಗಳೂರು: ‘ಫೆಬ್ರವರಿ 13ರ ಮುಂಜಾನೆ ಸುಮಾರು 4.30-4.45ರ ಸಮಯ. ಕರಣ್ ನಗರದಲ್ಲಿ ಭಾರತೀಯ ಯೋಧರ ಮೇಲೆ ದಾಳಿ ಮಾಡಲು ಬಂದಿದ್ದ ಪಾಕಿಸ್ಥಾನಿ ಉಗ್ರರಿಬ್ಬರು ತಮ್ಮ ಯೋಜನೆ ಫಲಿಸದೆ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಅಡಗಿ ಕುಳಿತಿದ್ದರು. ಆಗ ನಮ್ಮ ಎಲ್ಲ ಕ್ವಿಕ್ ಆ್ಯಕ್ಷನ್ ಟೀಂಗಳಿಗೂ ಮಾಹಿತಿ ರವಾನೆಯಾಯಿತು. ಕಟ್ಟಡದ ಎಲ್ಲ ಸುತ್ತುಗಳಿಂದಲೂ ನಿರಂತರ ಫೈರಿಂಗ್..! ಸರಿ ಸುಮಾರು ಒಂದೂವರೆ ದಿನಗಳ ಸತತ ಕಾರ್ಯಾಚರಣೆ ಬಳಿಕ ಅಡಗಿದ್ದ ಉಗ್ರರಿಬ್ಬರು ಹತರಾದರು. ಆ ಸುದ್ದಿಯನ್ನು ಕೇಳುತ್ತಲೇ ಅಮೂಲ್ಯವಾದುದನ್ನು ಸಾಧಿಸಿದ ಸಂಭ್ರಮ ನಮಗೆ..’
ಜಮ್ಮು ಕಾಶ್ಮೀರ ಕರಣ್ ನಗರದಲ್ಲಿ ಇತ್ತೀಚೆಗೆ ಕಟ್ಟಡವೊಂದಕ್ಕೆ ನುಗ್ಗಿದ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಕಾರ್ಯಾಚರಣೆ ತಂಡದಲ್ಲಿದ್ದ ಸುರತ್ಕಲ್ ಕೃಷ್ಣಾಪುರ ಮೂಲದ ಸಿಆರ್ಪಿಎಫ್ ಯೋಧ ಸತೀಶ್ ಅವರು, ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಖುಷಿಯನ್ನು ಹಂಚಿಕೊಂಡಿದ್ದು ಹೀಗೆ.

ಈ ಕಾರ್ಯಾಚರಣೆಯಲ್ಲಿ ದಕ್ಷಿಣ ಕನ್ನಡ ಮೂಲದ ಇಬ್ಬರು ಸಿಆರ್ಪಿಎಫ್ ಯೋಧರು ಭಾಗವಹಿಸಿದ್ದರು. ಓರ್ವರು ಮಂಗಳೂರಿನ ಸತೀಶ್ ಹಾಗೂ ಇನ್ನೊಬ್ಬರು ಪುತ್ತೂರು ಕಡಬದ ಹಳೆ ನೇರಂಕಿಯ ಜುಬೈರ್. ಕಾರ್ಯಾಚರಣೆ ವೇಳೆ ಈರ್ವರೂ ಬೇರೆ ಬೇರೆ ತಂಡದಲ್ಲಿದ್ದರು.
ಸತೀಶ್ ಪ್ರಸ್ತುತ ಶ್ರೀನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಶಿಬಿರದಿಂದ ಸುಮಾರು 17 ಕಿಮೀ. ದೂರದಲ್ಲಿ ಕರಣ್ನಗರವಿದೆ. ಫೆಬ್ರವರಿ 13ರ ಮುಂಜಾನೆ ಉಗ್ರರಿಬ್ಬರು ಸೇನಾ ಶಿಬಿರದ ಮೇಲೆ ದಾಳಿ ಮಾಡಿದರು. ತತ್ಕ್ಷಣವೇ ಕಾರ್ಯಪ್ರವೃತ್ತರಾದ ಮಹಾರಾಷ್ಟ್ರ ಮೂಲದ ಯೋಧ ರಘುನಾಥ್ ಅವರು ಹನ್ನೆರಡು ಸುತ್ತು ಫೈರಿಂಗ್ ನಡೆಸಿದರು. ಇದರಿಂದ ಹೆದರಿದ ಉಗ್ರರು ಓಡಿ ಹೋಗಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಅಡಗಿಕೊಂಡರು.
ಈ ಮಾಹಿತಿ ಶ್ರೀನಗರ ಸುತ್ತಮುತ್ತಲಿನ ಎಲ್ಲ ಬೆಟಾಲಿಯನ್ನ ಕ್ವಿಕ್ ಆ್ಯಕ್ಷನ್ ಟೀಂಗಳಿಗೆ ರವಾನೆಯಾಯಿತು. ಕೂಡಲೇ ಕಾರ್ಯ ಪ್ರವೃತ್ತರಾದ ಟೀಂನವರೂ 32 ಗಂಟೆ ಕಾಲ ಫೈರಿಂಗ್ ನಡೆಸಿದರು. ಇದರಲ್ಲಿ ಓರ್ವ ಯೋಧ ಹುತಾತ್ಮರಾದರೆ, ಇಬ್ಬರು ಉಗ್ರರನ್ನು ಸಾಯಿಸುವುದರಲ್ಲಿ ಭಾರತೀಯ ಸಿಆರ್ ಪಿಎಫ್ ಯೋಧರು ಯಶಸ್ವಿಯಾಗಿದ್ದರು.
‘ನಮ್ಮ ಟೀಂ 13ರ ಬೆಳಗ್ಗೆ ಸುಮಾರು 7.30ರ ವೇಳೆಗೆ ಶಿಬಿರದಿಂದ ಹೊರಟಿತು. ಕಟ್ಟಡದ ಸುತ್ತಮುತ್ತ ಫೈರಿಂಗ್ ನಡೆಯುತ್ತಲೇ ಇತ್ತು. ಆದರೆ ಕಟ್ಟಡದೊಳಗೆ ಈರ್ವರು ಎಲ್ಲಿ ಅಡಗಿದ್ದಾರೆಂಬ ಸುಳಿವು ಅಲಭ್ಯವಾಗಿತ್ತು. ಈ ಮಧ್ಯೆ ತಂಡದಲ್ಲಿದ್ದ ಯೋಧರೋರ್ವರು ಉಗ್ರರ ಫೈರಿಂಗ್ಗೆ ಸಿಲುಕಿ ವೀರ ಮರಣ ಹೊಂದಿದರು.
ನಮ್ಮ ತಂಡದಲ್ಲಿ ಒಟ್ಟು 17 ಮಂದಿ ಇದ್ದೆವು. ಕಟ್ಟಡದಲ್ಲಿದ್ದ ಸಾರ್ವಜನಿಕರನ್ನೆಲ್ಲ ಹೊರಗೆ ಕಳುಹಿಸಿದೆವು. ಕಟ್ಟಡದ ಎಡಭಾಗದಿಂದ ನಾವೂ ಫೈರಿಂಗ್ ಆರಂಭಿಸಿದೆವು. ಆ ರಾತ್ರಿ ಫೈರಿಂಗ್ ಸ್ವಲ್ಪ ತಗ್ಗಿದ್ದರೂ, ಮರುದಿನ ಬೆಳಗ್ಗೆ ಮತ್ತೆ ತೀವ್ರಗೊಂಡಿತ್ತು. ಕಟ್ಟಡವನ್ನು ಸಂಪೂರ್ಣ ಕೆಡವಲಾಯಿತು. 14ರ ಬೆಳಗ್ಗೆ 10.30ರ ವೇಳೆಗೆ ಓರ್ವ ಉಗ್ರನನ್ನು, ಮಧ್ಯಾಹ್ನ 1ರ ಸುಮಾರಿಗೆ ಇನ್ನೊಬ್ಬ ಉಗ್ರನನ್ನು ಸಾಯಿಸುವುದರಲ್ಲಿ ಅಲ್ಲಿ ಸೇರಿದ್ದ ತಂಡಗಳು ಯಶಸ್ವಿಯಾದವು. ಆ ಸುದ್ದಿ ಕೇಳುತ್ತಲೇ ವಿಜಯದ ನಗೆ ಬೀರಿದೆವು’ ಎನ್ನುತ್ತಾರೆ ಸತೀಶ್.
ದೇಶಸೇವೆಯ ಖುಷಿ: ಜುಬೈರ್
‘ಇದೇ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾದ ಪುತ್ತೂರಿನ ಯೋಧ ಜುಬೈರ್ ಅವರು ಹೇಳುವ ಪ್ರಕಾರ, ಕರಣ್ನಗರದಲ್ಲಿ ಸತತ 32 ಗಂಟೆಗಳ ಕಾರ್ಯಾಚರಣೆ ಬಳಿಕ ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾದದ್ದು ಜೀವನದ ಅತ್ಯಂತ ಹೆಮ್ಮೆಯ ಕ್ಷಣ. ಆ ಮೂಲಕ ದೇಶಸೇವೆಯ ತುಡಿತ ಇನ್ನೂ ಹೆಚ್ಚಾಗಿದೆ. ಆದರೆ ಇದರಲ್ಲಿ ಓರ್ವ ಯೋಧನನ್ನು ನಾವು ಕಳೆದುಕೊಳ್ಳಬೇಕಾಯಿತು’ ಎನ್ನುತ್ತಾರೆ.
ಜುಬೈರ್ ಕಾರ್ಯಾಚರಣೆಗೆ ಮೆಚ್ಚಿ ಭಾರತೀಯ ಸೇನೆಯಿಂದ ಡಿಜಿ ಡಿಸ್ಕ್ ಅವಾರ್ಡ್ ಕೂಡ ಅವರಿಗೆ ಲಭಿಸಿದೆ. ಅಲ್ಲದೆ ಪುತ್ತೂರಿನ ಈ ವೀರಯೋಧನ ಸಾಹಸದ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಶ್ಲಾಘನೆಯ ಪೋಸ್ಟ್ಗಳು ಸಾಕಷ್ಟು ವೈರಲ್ ಆಗುತ್ತಿವೆ .
ಶುಕ್ರವಾರವೂ..
‘ನಾವಿರುವ ಶಿಬಿರದಿಂದ ಸುಮಾರು 16 ಕಿಮೀ. ದೂರದಲ್ಲಿ ಶುಕ್ರವಾರವೂ ಉಗ್ರನೊಬ್ಬನ ಚಲನವಲನಗಳ ಬಗ್ಗೆ ಮಾಹಿತಿ ಬಂದಿದೆ. ಆದರೆ ಆತ ಯೋಧರ ಕೈಗೆ ಸಿಗದೆ ತಪ್ಪಿಸಿಕೊಂಡ. 2013 ರಿಂದೀಚೆಗೆ ಇಂಥ ಘಟನೆಗಳ ಬಗ್ಗೆ ಆಗಾಗ ನಿಗಾವಹಿಸುತ್ತಲೇ ಇದ್ದೇವೆ. ಶ್ರೀನಗರದಲ್ಲಿ ತುಂಬ ಕಠಿನ ಪರಿಸ್ಥಿತಿ ಇರುವುದರಿಂದ ನಾವೂ ಯಾವುದಕ್ಕೂ ಸಿದ್ಧರಾಗಿರುತ್ತೇವೆ’ ಎನ್ನುತ್ತಾರೆ ಅವರು.
ಧನ್ಯಾ ಬಾಳೆಕಜೆ (ಕೃಪೆ : ಉದಯವಾಣಿ)

