ಕುಂಬಾರ ಲಿಂಗಾಯತರು
‘ವಿವಾಹ ಪುರಾಣ’ ಕತೆಯ ಸಾರಾಂಶವೆಂದರೆ, ಶಿವ ಗಿರಿಜೆಯರ ಮದುವೆಯ ಸಮಯದಲ್ಲಿ ಗಿರಿರಾಜನು ಕೈ ಧಾರೆಯೆರೆಯಲು ಕಳಸ, ಹೂಜೆ ಮಾಡಲು ತನ್ನ ದಿವ್ಯ ಧ್ಯಾನದಿಂದ ವಿಷ್ಣುವಿನ ಚಕ್ರವನ್ನೇ ಕುಂಬಾರನ ತಿಗುರಿ ಮಾಡಿದ. ಬ್ರಹ್ಮ ಕೈಯಲ್ಲಿರುವ ಪುಸ್ತಕದ ಕಂಬಿಯನ್ನೇ ತಿಗುರಿಯ ಮೊಳೆ ಮಾಡಿದ. ಶಿವನ ಕೈಯ ಯೋಗ ದಂಡವನ್ನೇ ತಿಗುರಿಯ ಕೋಲನ್ನಾಗಿ ಮಾಡಿದ. ತನ್ನ ಜನಿವಾರವನ್ನು ತಿಗುರಿಯಿಂದ ಮಡಕೆಯನ್ನು ಬೇರ್ಪಡಿಸುವ ಕೊರೆದಾರ ಮಾಡಿದ. ಹೀಗೆ ಕುಂಬಾರನಿಗೆ ಬೇಕಾದ ಎಲ್ಲಾ ಸಲಕರಣೆಗಳನ್ನು ಮಾಡಿದ ಮೇಲೆ ಯಮನ ಕೋಣದ ಮೇಲೆ ಮಣ್ಣನ್ನು ಹೇರಿ ತರಿಸಲಾಯಿತು. ಗಿರಿರಾಜನು ಕುಂಬಾರನನ್ನು ಸೃಷ್ಟಿಸಿದನು. ಕುಂಬಾರನು ಮಂಗಲ ಕಾರ್ಯಕ್ಕೆ ಬೇಕಾದ ಕಲಶ, ಹೂಜೆ, ಪಂಚ ಬಾಗೀನಗಳನ್ನು ಕೊಟ್ಟು, ಮಣ್ಣಿನ ಭಾಂಡೆಗಳನ್ನು ವಿವಾಹ ಮಂಟಪಕ್ಕೆ ತಂದರು. ಅದರ ಪ್ರತೀಕವಾಗಿಯೇ ಈಗಲೂ ಕುಂಬಾರನ ಮನೆಯಿಂದ ಐರಾಣಿ ಗಡಿಗೆಗಳನ್ನು ತರುವ ಪದ್ಧತಿ ನಡೆದು ಬಂದಿದೆ. ಜನಪದದಲ್ಲಿ ಐರಾಣಿ ಗಡಿಗೆಗಳು ದೇವರೆಂದೇ ನಂಬಿಕೆ. ಹೀಗೆ ಈಶ್ವರನ ಮದುವೆಯ ಸಂದರ್ಭದಲ್ಲಿ ಹುಟ್ಟಿದ ಕುಂಬಾರರು, “ಗಿರಿರಾಜನ ವಂಶಸ್ಥರು, ಶಿವನ ಮೈದುನರು, ನಾವು ಗಣಪತಿಯ ಸೋದರಮಾವಂದಿರು” ಎಂದು ಈ ಶಾಸನ ಹೇಳುತ್ತದೆ.
ಗ್ರಾಮಜೀವನದಲ್ಲಿ ಕುಂಬಾರ
ಗ್ರಾಮೀಣ ಸಮಾಜದಲ್ಲಿ ಕುಂಬಾರನ ಪಾತ್ರ ಬಹುಮುಖ್ಯವಾದುದು. ಅಡುಗೆಗೆ ಬೇಕಾದ ಮಡಕೆ, ಕುಡಿಕೆಗಳು, ದನಕರುಗಳಿಗೆ ಕುಡಿವ ನೀರಿನ ಬಾನಿಗಳು, ಸಾಂಸ್ಕೃತಿಕ ಸಂದರ್ಭದ ಮಡಕೆಗಳು, ಮದುವೆಯ ಐರಾಣಿ ಗಡಿಗೆ, ದೇವತೆಯ ಜಾತ್ರೆಗೆ ಗಟ್ಟಿಗಡಿಗೆ, ಆಟಕ್ಕೆ ಬೇಕಾದ ಗೊಂಬೆ, ಪೂಜೆ-ಹರಕೆಗಳಿಗೆ ಬೇಕಾಗುವ ಮೂರುತಿ, ಶವಸಂಸ್ಕಾರಕ್ಕೆ ಪ್ರೇತಗಡಿಗೆ, ಕಳ್ಳು (ಹೆಂಡ) ಇಳುವಲು ಗೊಬ್ಬೆ… ಹೀಗೆ ಅನೇಕ ತರದ ಮಡಕೆಗಳನ್ನೂ, ಮಣ್ಣಿನ ಮೂರುತಿಗಳನ್ನೂ ಪೂರೈಸುವುದು ಕುಂಬಾರನ ಕೆಲಸವಾಗಿದೆ. ಗ್ರಾಮದ ಪ್ರಮುಖ 12 ಜನ ಪ್ರಮುಖ ಆಯಗಾರರಲ್ಲಿ ಕುಂಬಾರನೂ ಒಬ್ಬ. ವರ್ಷವಿಡೀ ರೈತನಿಗೆ ಬೇಕಾಗುವ ಮಡಕೆ-ಕುಡಿಕೆಗಳನ್ನು ಪೂರೈಸಿ, ಸುಗ್ಗಿಯ ಸಮಯದಲ್ಲಿ ಇವನು ರೈತನಿಂದ ದವಸ-ಧಾನ್ಯಗಳನ್ನು ಪಡೆಯುತ್ತಾನೆ. ಕುಂಬಾರನು ಮಡಕೆ ಮಾಡುವುದಲ್ಲದೆ ಬೇರೆ ಬೇರೆ ವೃತ್ತಿಗಳನ್ನು ಕೂಡ ಮಾಡುತ್ತಾನೆ. ಮನೆ ಕಟ್ಟುವಾಗ ಬಿದರಿನ ಹಂದರದ ಮೇಲೆ ಮಣ್ಣನ್ನು ಮೆತ್ತಿ ಗೋಡೆಯನ್ನೆಬ್ಬಿಸುವುದು, ನೆಲಕ್ಕೆ ಮಣ್ಣನ್ನು ಘಟ್ಟಿಸಿ ನಯಗಾರೆಯಂತೆ ಮಾರ್ಪಡಿಸುವುದು, ಇವರು ಹಳ್ಳಿಗಳಲ್ಲಿ ಕುಂಬಾರರ ಕೆಲಸಗಳೇ ಆಗಿವೆ. ಆಲೆಮನೆಗಳಲ್ಲಿ ಕಬ್ಬಿನ ಹಾಲನ್ನು ಕುದಿಸುವ ಬಾಣಲಿಗಳಿಗೆ ಕುಂಬಾರರೆ ಕಟ್ಟೆಯನ್ನು ಕಟ್ಟುವರು. ಹೀಗೆ ಗ್ರಾಮ ಜೀವನದಲ್ಲಿ ನಿತ್ಯ, ನೈಮಿತ್ತಿಕ ಪ್ರಯೋಜನಗಳಿಗೆಲ್ಲ ಕುಂಬಾರನ ನೆರವಿದೆ.
ಕುಂಬಾರ-ಲಿಂಗಾಯತರ ಸ್ಥಾನಮಾನ
ದಕ್ಷಿಣ ಭಾರತದ ಕುಂಬಾರರನ್ನು ಶೈವ, ವೀರಶೈವ ಮತ್ತು ವೈಷ್ಣವ ಧರ್ಮೀಯರೆಂದು ವಿಂಗಡಿಸಬಹುದು. ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತ ಧರ್ಮದ ಕುಂಬಾರರಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಗುನಗ ಕುಂಬಾರರು ಗ್ರಾಮದೇವತೆಯ ಅರ್ಚಕರು. ಇವರು ಹೆಚ್ಚಾಗಿ ಶೃಂಗೇರಿ ಪೀಠಕ್ಕೆ ನಡೆದುಕೊಳ್ಳುವರು. ಕುಂಬಾರರು ಜಾತಿ ನಿರ್ದೇಶನದ ದೃಷ್ಟಿಯಿಂದ ಶೂದ್ರರೆಂದೇ ಪರಿಗಣಿತರಾಗಿದ್ದರೂ ಬ್ರಾಹ್ಮಣ ತಂದೆ, ಶೂದ್ರ ತಾಯಿಯ ಮೂಲದವರೆಂದು ಕುಂಬಾರರ ಕುರಿತಾದ ಹಲವಾರು ಐತಿಹ್ಯಗಳಿವೆ. ಹೀಗಾಗಿ ಇವರನ್ನು ದ್ವಿಜಾತಿ ಎಂದು ಹೇಳುತ್ತಿದ್ದುದುಂಟು. ಏನಿದ್ದರೂ ಶ್ರೇಣೀಕೃತ ಸಮಾಜದಲ್ಲಿ ಶೂದ್ರರಲ್ಲಿಯೇ ಮೇಲುವರ್ಗದವರಾಗಿದ್ದುದು ತಿಳಿದು ಬರುತ್ತದೆ. ವರ್ಣಾಶ್ರಮ ಪದ್ಧತಿಯ ನಾಲ್ಕು ಜಾತಿಗಳ ಮಿಶ್ರಣದಿಂದ ಕುಂಬಾರ ಉಪಜಾತಿ ಹುಟ್ಟಿತೆನ್ನುವುದು ಕೆಲವು ವಿದ್ವಾಂಸರ ಅಭಿಪ್ರಾಯ. ಸರ್ ವಿಲಿಯಮ್ ಮೊನಿಯರ್ ತಮ್ಮ ಸಂಸ್ಕೃತ ಶಬ್ದಕೋಶದಲ್ಲಿ ಕುಂಬಾರ ಕುಲದ ತಾಯಿ ಕ್ಷತ್ರಿಯಳು, ತಂದೆ ಬ್ರಾಹ್ಮಣ ಎಂದು ವಿವರಿಸಿದ್ದಾರೆ. ಅನೇಕ ಕುಂಬಾರ ಉಪಪಂಗಡದವರು ಶಾಲಿವಾಹನನ್ನು ತಮ್ಮ ಕುಲದ ಮೂಲಪುರುಷ ಎಂದು ಹೇಳಿಕೊಳ್ಳುವರು. ಇದೇ ರೀತಿ ಸರ್ವಜ್ಞನ ಹುಟ್ಟಿನ ಬಗೆಗೂ ಇದೆ. ಈ ಕುರಿತಾದ ವಿವಾದ ಅಪರಿಹಾರ್ಯ ವಿಷಯ.
ಕುಂಬಾರರು ತಮ್ಮ ಸ್ಥಾನಮಾನ ದೃಷ್ಟಿಯಿಂದ ಮೇಲ್ಪದರಿನಲ್ಲಿದ್ದು, ಸಾಮಾಜಿಕ ಮೇಲ್ಮೈಯನ್ನು ಸಾಧಿಸಲು ಆಗಾಗ ತಮ್ಮ ಹಕ್ಕುಗಳಿಗಾಗಿ ಸಂಘರ್ಷ ನಡೆಸುತ್ತಿದ್ದುದು ತಿಳಿದು ಬರುತ್ತದೆ. ಯಳಂದೂರಿನ ಶಾಸನವೊಂದರಲ್ಲಿ ತಮ್ಮ ಹಕ್ಕುಗಳಿಗಾಗಿ ಇವರು ಪರೀಕ್ಷೆಗೊಳಗಾದ ಘಟನೆ ಹೀಗೆ ನಿರೂಪಿತವಾಗಿದೆ; ಕುಂಬಾರರಿಗೆ ಮದುವೆ ಪ್ರಸಂಗದಲ್ಲಿ ಕ್ಷೌರಿಕರಿಂದ ಕಾಲುಗುರು ತೆಗೆಯಿಸಿಕೊಳ್ಳುವ ಹಕ್ಕು ಇಲ್ಲವೆಂಬ, ಅಗಸರಿಂದ ಚಪ್ಪರಕ್ಕೆ ಬಟ್ಟೆ ಮೇಲ್ಕಟ್ಟು ಕಟ್ಟಿಸಿಕೊಳ್ಳುವ ಹಕ್ಕು ಇಲ್ಲವೆಂಬ ವಾದ ಹುಟ್ಟುತ್ತದೆ. ಆಗ ಕುಂಬಾರರು ಪರಿಹಾರ ಕಂಡುಕೊಳ್ಳಲು ಹರದನಹಳ್ಳಿಯ ದಿವ್ಯಲಿಂಗೇಶ್ವರನ ಸಮಕ್ಷಮದಲ್ಲಿ ಕುದಿಯುವ ತುಪ್ಪದಲ್ಲಿ ಕೈಯಿಟ್ಟು ಸತ್ವಪರೀಕ್ಷೆಯಲ್ಲಿ ಗೆಲ್ಲುತ್ತಾರೆ. ಆಗ ಕುಂಬಾರರಿಗೆ ಕ್ಷೌರಿಕರಿಂದ ಕಾಲುಗುರು ತೆಗೆಯಿಸಿಕೊಳ್ಳುವ, ಅಗಸರಿಂದ ಮೇಲ್ಕಟ್ಟು ಕಟ್ಟಿಸಿಕೊಳ್ಳುವ ಹಕ್ಕುಂಟು ಎಂದು ಶಾಸನ ಬರೆಸಲಾಯಿತು. ಮಹಾರಾಷ್ಟ್ರದಲ್ಲಿ ಪೇಶ್ವೆಯರ ಆಡಳಿತ ಕಾಲದಲ್ಲಿ ಅಲ್ಲಿಯ ಬಡಗಿಯವರು “ಕುಂಬಾರ ಜನಾಂಗದವರು ಮದುಮಗನ ಮೆರವಣಿಗೆಯನ್ನು ರಾಜಬೀದಿಯಲ್ಲಿ ಅಶ್ವಾರೂಢವಾಗಿ ಮಾಡಬಾರದು” ಎಂದು ತಕರಾರು ತೆಗೆದಾಗ. ಅದನ್ನು ಪೇಶ್ವೆಯವರು ತಳ್ಳಿಹಾಕಿದುದು ತಿಳಿದು ಬರುತ್ತದೆ.
ಕುಂಭ (ನೀರಿನ ಗಡಿಗೆ)+ಕಾರ= ಕುಂಭಕಾರ> ಕುಂಬಾರ ಎಂದು ನಿಷ್ಪತ್ತಿ ಹೇಳಲಾಗುತ್ತದೆ. ಈ ದೇಶದಲ್ಲಿ ಬ್ರಾಹ್ಮಣ ಮೊದಲ್ಗೊಂಡು ಅಂತ್ಯಜರವರೆಗೆ ಅನೇಖ ಉಪಜಾತಿಗಳಿವೆ. ವಿದೇಶಿ ಪ್ರವಾಸಿಗ ಡಾ.ಬುಕನೆನ್ ಹಳೆ ಮೈಸೂರು ಪ್ರದೇಶದಲ್ಲಿನ ಜಾತಿಗಳ ಎಡಗೈ ಬಲಗೈ ಕುರಿತು ಒಂದು ಯಾದಿಯನ್ನೇ ಸಿದ್ಧಪಡಿಸಿದ್ದಾನೆ. ಬಲಗೈ ಪಂಗಡದ ಹದಿನೆಂಟು ಜಾತಿಗಳಲ್ಲಿ ಕುಂಬಾರರದು ಕೂಡ ಒಂದು. ಕುಂಬಾರರಲ್ಲಿನ ಉಪಜಾತಿಗಳು, ಅವರು ಬಳಸುವ ಉಪಕರಣಗಳ ರಚನೆ, ಮಡಕೆಗಳ ಬಣ್ಣ, ಅವರ ಸಾಕುಪ್ರಾಣಿಗಳು ಹಾಗೂ ಅವರು ಮಾಡುವ ಇತರೆ ವೃತ್ತಿಗಳಿಂದ ಹುಟ್ಟಿಕೊಂಡಿವೆ. ತಿಗುರಿಯನ್ನು ಬಳಸದೆ ಬರಿಕೈಯಿಂದ ಮಡಕೆ ಮಾಡುವವರನ್ನು ‘ಕೈಕುಂಬಾರ’ರೆಂದು, ತಿಗುರಿಯಿಂದ ಮಡಕೆ ಮಾಡುವವರನ್ನು ‘ಚಕ್ರ ಕುಂಬಾರ’ರೆಂದು, ಅದರಲ್ಲೂ ಸಣ್ಣ ಚಕ್ರ, ದೊಡ್ಡ ಚಕ್ರ, ಮರದ ಚಕ್ರ, ಕಲ್ಲು ಚಕ್ರ ಎಂಬ ಪ್ರಭೇದಗಳಿವೆ. ಉತ್ತರ ಕರ್ನಾಟಕದ ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಚಕ್ರಸಾಲಿ ಎಂಬ ಅಡ್ಡಹೆಸರು ಹೆಚ್ಚು ಬಳಕೆಯಲ್ಲಿದೆ. ಬಿಳಿವರ್ಣದ ಮಡಕೆ ಸುಡುವವರನ್ನು ‘ಗೋರ ಕುಂಬಾರ’ ಎಂದು ಮಹಾರಾಷ್ಟ್ರದಲ್ಲಿ ಕರೆಯಲಾಗುತ್ತದೆ. ಸಂತ ಗೋರಕುಂಬಾರ ಅದೇ ಪಂಗಡದವನಿರಬೇಕು. ಮಹಾರಾಷ್ಟ್ರದಲ್ಲಿ ರಾಣಿಕುಂಬಾರ ಎನ್ನುವ ಪಂಗಡವಿದೆ. ಉತ್ತರ ಕನ್ನಡ ಜಿಲ್ಲೆಯ ಗುನಗ ಕುಂಬಾರರು ಗ್ರಾಮದೇವತೆಯ ಅರ್ಚಕರು. ತುಳುನಾಡಿನಲ್ಲಿ ‘ಮೂಲ್ಯ’ ಎಂಬ ತುಳುಪದ ಬಳಕೆಯಲ್ಲಿದೆ. ಹಳೆ ಮೈಸೂರು ಭಾಗದಲ್ಲಿ ‘ಮುಳ್ಳು ಕುಂಬಾರ’, ‘ಬಯಲು ಕುಂಬಾರ’, ‘ಕುಂಬಾರ ಶೆಟ್ಟಿ’ ಎನ್ನುವ ಪಂಗಡಗಳಿವೆ. ಹೀಗೆ ಕುಂಬಾರರಲ್ಲಿಯೂ ಉಪಜಾತಿಗಳ ದೊಡ್ಡ ಪಟ್ಟಿಯೇ ಇದೆ.
ಲಿಂಗಾಯತ ಕುಂಬಾರ
ಕರ್ನಾಟಕದಲ್ಲಿ ನೆಲೆಸಿರುವ ಕುಂಬಾರ ಸಮಾಜದಲ್ಲಿ ಲಿಂಗಾಯತ ಕುಂಬಾರರದು ಪ್ರಮುಖ ಶಾಖೆ. ಬೇರೆ ಕುಂಬಾರ ಶಾಖೆಗಳೊಂದಿಗೆ ಹೋಲಿಸಿದರೆ ತುಂಬಾ ವಿಶಿಷ್ಟವಾಗಿರುವ ಮತ್ತು ಅವರಿಗಿಂತ ಜನಸಂಖ್ಯೆಯಲ್ಲಿ ಅಧಿಕವಾಗಿ ಮತ್ತು ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ವಾಸವಾಗಿರುವ ಪಂಗಡವಿದು. ಭೌಗೋಳಿಕ ವಿಸ್ತಾರದಲ್ಲಿ ಮಂಡ್ಯ, ಮೈಸೂರು, ಕೋಲಾರ, ದಕ್ಷಿಣ ಕನ್ನಡ, ಉತ್ತರ ಕನ್ನಡ ಈ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳಲ್ಲಿಯೂ ಲಿಂಗಾಯತ ಕುಂಬಾರರು ನೆಲೆಸಿರುವುದು ಕಂಡುಬರುತ್ತದೆ. ಇವರು ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕದಲ್ಲಿ ಹೆಚ್ಚಾಗಿಯೂ, ದಕ್ಷಿಣ ಕರ್ನಾಟಕದಲ್ಲಿ ವಿರಳವಾಗಿಯೂ ನೆಲೆಸಿರುವರು. ಕರ್ನಾಟಕ ರಾಜ್ಯದಲ್ಲಿ ಲಿಂಗವಂತ ಕುಂಬಾರರ ಸಂಖ್ಯೆ ಐದು ಲಕ್ಷಕ್ಕೂ ಹೆಚ್ಚಿದೆ. ಕರ್ನಾಟಕವನ್ನು ಬಿಟ್ಟರೆ ಗಡಿನಾಡು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ಕೆಲವೊಂದು ಭಾಗಗಳಲ್ಲಿ ಲಿಂಗಾಯತ ಕುಂಬಾರರು ಅಲ್ಪಸಂಖ್ಯೆಯಲ್ಲಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರ, ಸೊಲ್ಲಾಪುರ, ಪಂಡರಾಪುರ ಪ್ರದೇಶಗಳಲ್ಲಿ; ಆಂಧ್ರಪ್ರದೇಶದ ಆದವಾನಿ, ಆಲೂರು, ರಾಯದುರ್ಗ, ಅನಂತಪುರ ಪ್ರದೇಶಗಳಲ್ಲಿ ಲಿಂಗಾಯತ ಕುಂಬಾರರು ಇರುವುದು ಕಂಡುಬರುತ್ತದೆ. ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದಿನಲ್ಲಿ ಲಿಂಗಾಯತ ಕುಂಬಾರ ಕುಟುಂಬಗಳಿರುವುದು ತಿಳಿದು ಬಂದಿದೆ. ಇವರು ಶುದ್ಧ ಕನ್ನಡಿಗರು, ಸಸ್ಯಾಹಾರಿಗಳು, ಶಿವಭಕ್ತರು.
ಲಿಂಗಾಯತ ಕುಂಬಾರ ಮೂಲ
ಹನ್ನೆರಡನೆ ಶತಮಾನದ ಬಸವಯುಗದಲ್ಲಿ ಅನೇಕ ವ್ಯಕ್ತಿಯ ಜನರು ಲಿಂಗವಂತ ಧರ್ಮವನ್ನು ಸ್ವೀಕರಿಸಿರುವುದು ತಿಳಿದ ವಿಷಯ. ಕುಂಬಾರರು ಮೂಲತಃ ಶಿವಭಕ್ತರಾಗಿದ್ದು, ಬಸವಯುಗದಲ್ಲಿ ಲಿಂಗವಂತ ಧರ್ಮವನ್ನು ಸ್ವೀಕರಿಸಿದರು. ಇದಕ್ಕೆ ಪುಷ್ಟಿಯಾಗಿ The Mysore Tribes and Castes ಎಂಬ ಪುಸ್ತಕದಲ್ಲಿ ಶ್ರೀನಿವಾಸನ್ ಅವರು ಲಿಂಗಾಯತ ಕುಂಬಾರರು ಮತಾಂತರ ಹೊಂದಿದವರೆಂದು ಹೇಳುತ್ತಾರೆ. ಪೂರ್ವದಲ್ಲಿದ್ದ ಕುಂಬಾರ ಗುಂಡಯ್ಯ ಮೊದಲಾದ ಕುಂಬಾರರು ಶೈವದಿಂದ ಲಿಂಗಾಯತ ಧರ್ಮಕ್ಕೆ ಹೊರಳಿದರೆಂದು ತೋರುತ್ತದೆ. ಹೀಗಿದ್ದೂ ಹನ್ನೆರಡನೆಯ ಶತಮಾನದ ಶರಣ ಸಮೂಹದಲ್ಲಿ ಸಮಾಜದ ಬಹುಮುಖ್ಯ ಕಸುಬುದಾರರಾಗಿದ್ದ ಕುಂಬಾರ ಜನಾಂಗದ ಶರಣರಾರೂ ಕಂಡುಬರದಿರುವುದು ಕೌತುಕದ ವಿಷಯ. ನಗೆಯ ಮಾರಿತಂದೆ ಕುಂಬಾರ ಜನಾಂಗದ ಶರಣನೆಂದು ಕೆಲವೆಡೆ ಮಾತ್ರ ಪ್ರಸ್ತಾಪಿಸಲಾಗಿದೆ. ಏನಿದ್ದರೂ ಲಿಂಗಾಯತ ಕುಂಬಾರರ ಕುರಿತಂತೆ, ಸದ್ಯದ ಮಟ್ಟಿಗೆ ಬಸವಯುಗದಿಂದಲೇ ಆರಂಭಿಸಬೇಕಾಗಿರುವುದು ಅನಿವಾರ್ಯವೆಂದು ತೋರುತ್ತದೆ. ಜನನದಿಂದ ಮರಣದವರೆಗಿನ ಇವರ ಎಲ್ಲ ಆಚರಣೆಗಳು, ನೀತಿ, ನಡಾವಳಿಗಳು, ಧಾರ್ಮಿಕ ಆಚರಣೆಗಳು ಆಹಾರ, ಉಡುಪು, ಇತ್ಯಾದಿ ಎಲ್ಲವೂ ಲಿಂಗವಂತ ಧರ್ಮದ ಚೌಕಟ್ಟಿಗೆ ಒಳಪಟ್ಟಿವೆ. ಉಳಿದ ವೀರಶೈವರಿಗೂ, ಇವರಿಗೂ ಯಾವುದೇ ಭೇದವಿಲ್ಲ. ಲಿಂಗಾಯತ ಕುಂಬಾರರು, ಇಷ್ಟಲಿಂಗ ಉಪಾಸನೆ, ಷಟಸ್ಥಲ, ಪಂಚಾಚಾರ, ಅಷ್ಟಾವರಣಗಳಲ್ಲಿ ನಂಬಿಕೆಯುಳ್ಳವರು. ಗುರು ಲಿಂಗ ಜಂಗಮ ಉಪಾಸಕರು. ಪುರೋಹಿತ ಕಾರ್ಯಗಳಿಗೆ ಜಂಗಮರು ಆಗಮಿಸುವರು. ಶುದ್ಧ ಸಸ್ಯಾಹಾರಿಗಳು. ಹೀಗಿದ್ದೂ ಈ ಸಮಾಜದಲ್ಲಿ ಅನೇಕ ಭೇದಗಳು ಬೆಳೆದು ಬಂದಿವೆ. ಶೈಕ್ಷಣಿಕವಾಗಿ ಮುಂದುವರಿದಂತೆಲ್ಲ ಇವು ಕಳಚಿ ಬೀಳುತ್ತಿರುವುದು ಉತ್ತಮ ಬೆಳವಣಿಗೆ.
ಇವರು ರೇಣುಕ, ದಾರುಕ, ಗಜಕರ್ಣ, ಘಂಟಾಕರ್ಣ, ವಿಶ್ವಕರ್ಮ ಎಂಬ ಐದು ಗೋತ್ರಗಳನ್ನು ಹೇಳಿಕೊಳ್ಳುತ್ತಿದ್ದರೂ ಗೋತ್ರಗಳ ಆಚರಣೆ ಇವರಲ್ಲಿ ಇಲ್ಲ. ಲಿಂಗಾಯತ ಕುಂಬಾರರಲ್ಲಿ ಮೊದಲಿನ ಕಾಲದಲ್ಲಿ ನೆಂಟಸ್ಥಿಕೆ ಬೆಳೆಸುವಾಗ ಗೋತ್ರಗಳಿಗೆ ಬದಲು ಮನೆದೇವರ ಲೆಕ್ಕಾಚಾರವಿತ್ತು. ಮೈಲಾರಲಿಂಗ ಎಲ್ಲಮ್ಮ ದೇವರಿರುವ ಮನೆತನಗಳೊಡನೆ ವೀರಭದ್ರ, ಬಸವಣ್ಣ, ಸಂಗಮೇಶ ಮನೆದೇವರಿರುವವರು ನೆಂಟಸ್ಥಿಕೆ ಬೆಳೆಸುತ್ತಿರಲಿಲ್ಲ. ಈಗೀಗ ಅದು ಕಡಿಮೆಯಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಹೆಚ್ಚಾಗಿಯೂ ಮಧ್ಯ ಕರ್ನಾಟಕದಲ್ಲಿ ವಿರಳವಾಗಿಯೂ ನೆಲೆಸಿರುವ ಸಜ್ಜನ ಕುಂಬಾರರು ಒಂದು ಕಾಲಕ್ಕೆ ಲಿಂಗಾಯತ ಕುಂಬಾರರಾಗಿದ್ದುದು ತಿಳಿದು ಬರುತ್ತದೆ. ಮಧುಗಿರಿಯ ಸುತ್ತಮುತ್ತ ಸಜ್ಜನ ಕುಂಬಾರರು, ಶೆಟ್ಟಿ ಕುಂಬಾರರು, ಲಿಂಗಾಯತ ಕುಂಬಾರರು ಇದ್ದಾರೆ. ಸಜ್ಜನ ಕುಂಬಾರರ ಕುರಿತು ಇಲ್ಲೊಂದು ಕತೆ ಪ್ರಚಲಿತದಲ್ಲಿದೆ. ಬಹಳ ಹಿಂದೆ ಸಣ್ಣ ವಯಸ್ಸಿನಲ್ಲಿ ವಿಧವೆಯಾದ ಶೆಟ್ಟಿ ಕುಂಬಾರ ಹೆಣ್ಣುಮಗಳು ಲಿಂಗಾಯತ ಪುರುಷನ ಸಂಪರ್ಕ ಪಡೆದು ಮಗುವಿಗೆ ಜನ್ಮ ನೀಡಿದಳು. ಅವರು ಸಜ್ಜನ ಕುಂಬಾರರಾದರು. ಇನ್ನೊಂದು ಕತೆ ಹೀಗಿದೆ: ಅಸಾಧಾರಣ ಮಾಂತ್ರಿಕ ಸಜ್ಜನ ಕುಂಬಾರನೊಬ್ಬ ಲಿಂಗಾಯತ ಆಚರಣೆಗಳನ್ನು ಧಿಕ್ಕರಿಸಿ ಮಾಂಸಾಹಾರಿಯಾಗಿದ್ದರಿಂದ ಅವನನ್ನು ಕುಲದಿಂದ ಹೊರಹಾಕಿದರು. ಇದರಿಂದ ಕುಪಿತಗೊಂಡ ಆತ ಪ್ಲೇಗು ಹರಡುವಂತೆ ಮಾಡಿ, ತನ್ನನ್ನು ಹೊರಹಾಕಿದವರೆಲ್ಲಾ ಮದ್ಯ, ಮಾಂಸ ಸೇವನೆ ಮಾಡುವವರೆಗೆ ಬಿಡದೆ ಕಾಡಿದ. ಇದರಿಂದಾಗಿ ಹೆಚ್ಚಿನ ಸಜ್ಜನ ಕುಂಬಾರರು ಮಾಂಸಾಹಾರಿಗಳಾದರು. ಅಲ್ಲಿಂದ ತಪ್ಪಿಸಿಕೊಂಡು ಹೋದವರು ಲಿಂಗಾಯತ ಕುಂಬಾರರಾಗಿ ಉಳಿದರು. ಹೀಗೆ ಮಾಂಸಾಹಾರಿಗಳಾದರೂ ಸಜ್ಜನ ಕುಂಬಾರರ ಅನೇಕ ಆಚರಣೆಗಳು ಕುಂಬಾರ ಲಿಂಗಾಯತರ ಆಚರಣೆಗಳನ್ನು ಹೋಲುತ್ತವೆ. ಮದುವೆಯ ಸಂದರ್ಭದಲ್ಲಿ ಕುಂಬೇಶ್ವರ ಪೂಜೆಗೆ ಅವರು ಬಹಳ ಮಹತ್ವ ಕೊಡುತ್ತಾರೆ. ಮದುವೆ ಮುಂತಾದ ಮಂಗಳ ಕಾರ್ಯಗಳ ಪೌರೋಹಿತ್ಯಕ್ಕೆ ಜಂಗಮರನ್ನು ಬರಮಾಡಿಕೊಳ್ಳುತ್ತಾರೆ.
ಲಿಂಗಾಯತ ಕುಂಬಾರರು ತಮ್ಮ ಹೆಸರಿನ ಮುಂದೆ ಇಲ್ಲವೆ ಹಿಂದೆ ಗುಂಡಾ ಭಕ್ತ ಎಂದು ಬರೆದುಕೊಳ್ಳುವ ರೂಢಿಯಿತ್ತು. ಇತ್ತೀಚೆಗೆ ಅದು ಕಡಿಮೆಯಾಗಿದೆ. ಸಾಮಾನ್ಯವಾಗಿ ಕುಂಬಾರ ಇಲ್ಲವೆ ಚಕ್ರಸಾಲಿ ಎಂದು ಬರೆದುಕೊಳ್ಳುತ್ತಾರೆ. ಗುಲ್ಬರ್ಗಾದ ಕೆಲವು ಲಿಂಗಾಯತ ಕುಂಬಾರರು ಕುಲಾಲ ಎಂಬ ಹೆಸರನ್ನಿಟ್ಟುಕೊಂಡಿರುವುದು ತಿಳಿದು ಬರುತ್ತದೆ. ಚಕ್ರಸಾಲಿ ಎಂಬುದು ಸಾಮಾನ್ಯವಾಗಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕು, ಹಿರೆಕೆರೂರು ತಾಲ್ಲೂಕು ಹಾಗೂ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕು, ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಕುಂಬಾರರಲ್ಲಿ ಮಾತ್ರ ಹೆಚ್ಚಾಗಿ ಕಂಡುಬರುತ್ತದೆ. ಈ ಪ್ರದೇಶ ಸರ್ವಜ್ಞನ ಹುಟ್ಟೂರಾದ ಹಿರೆಕೆರೂರು ತಾಲ್ಲೂಕಿನ ಮಾಸೂರಿಗೆ ಹತ್ತಿರವಾದುದು. ಇದು ಕೈಯಿಂದ ಕುಂಬಾರಿಕೆ ಮಾಡುವ ಕೈಕುಂಬಾರ ಪಂಗಡದವರಲ್ಲ ಎಂಬ ಅರ್ಥ ಕೊಡುವಂತೆ ತೋರುತ್ತದೆ.
ಹಾಸನ, ಚಿಕ್ಕಮಗಳೂರು ಜಿಲ್ಲೆಯ ಹೆಚ್ಚಿನ ಲಿಂಗಾಯತ ಕುಂಬಾರರು ತಮ್ಮ ಹೆಸರಿನ ಕೊನೆಯಲ್ಲಿ ಶೆಟ್ಟರು ಎಂದು ಇಟ್ಟುಕೊಳ್ಳುವರು. ಕುಂಬಾರಶೆಟ್ಟಿ ಎನ್ನುವ ಪದ, ಬಹು ಹಿಂದಿನಿಂದಲೂ ಬಳಕೆಯಲ್ಲಿದ್ದಂತೆ ಕಂಡುಬರುತ್ತದೆ. ಇವೆಲ್ಲ ಏನೇ ಇರಲಿ, ಕುಂಬಾರ ಎಂಬ ಪದವನ್ನು ಇಂದಿನ ಅನೇಕ ಯುವಕರು, ತಮ್ಮ ಹೆಸರಿನೊಂದಿಗೆ ಇಟ್ಟುಕೊಳ್ಳಲು ಇಷ್ಟಪಡುವುದಿಲ್ಲ. ಹೆಚ್ಚು ಶ್ರಮ ಮತ್ತು ಕಡಿಮೆ ಆದಾಯದ ಈ ವೃತ್ತಿಗೆ ಇದ್ದ ಮಾನ್ಯತೆ ಅಷ್ಟಕ್ಕಷ್ಟೆ. ನನ್ನ ಅಜ್ಜಿ ನಾನು ಚಿಕ್ಕವನಿದ್ದಾಗ, “ನಿನ್ನನ್ನು ಯಾರಾದರೂ ಯಾವ ಪೈಕಿ? ಎಂದು ಕೇಳಿದರೆ ಕುಂಬಾರ ಎಂದು ಹೇಳಬೇಡ, ಪಂಚಾಚಾರದವರು(=ಪಂಚಮಸಾಲಿ) ಎಂದು ಹೇಳು” ಎಂದು ಬೋಧಿಸುತ್ತಿದ್ದಳು.
ಲಿಂಗವಂತ ಕುಂಬಾರರ ಹೆಸರುಗಳು ಉಳಿದ ಲಿಂಗವಂತರಂತೆ ಅಪ್ಪ, ಅಣ್ಣ, ಅಕ್ಕ, ಅವ್ವ ಹೆಸರಿನಿಂದ ಕೊನೆಗೊಳ್ಳುತ್ತವೆ. ಉದಾ: ಬಸಪ್ಪ, ಶಿವಪ್ಪ, ವೀರಭದ್ರಪ್ಪ, ಲಿಂಗಣ್ಣ, ಶಂಕ್ರಣ್ಣ, ಬಸಣ್ಣ ಇತ್ಯಾದಿ. ಹೆಂಗಸರ ಹೆಸರುಗಳು- ಗಂಗವ್ವ, ಹಾಲವ್ವ, ಬಸವ್ವ, ಮಹದೇವಕ್ಕ, ನೀಲಕ್ಕ, ಇತ್ಯಾದಿ.
ಲಿಂಗಾಯತ ಕುಂಬಾರರು ಈಶ್ವರ, ಬಸವಣ್ಣ, ವೀರಭದ್ರ ದೇವರುಗಳನ್ನು ಹೆಚ್ಚಾಗಿ ಪೂಜಿಸುವರು. ಆಯಾ ಗ್ರಾಮದ ದೇವತೆಗಳಲ್ಲೂ ಇವರಿಗೆ ನಂಬಿಕೆ ಇದೆ. ಇಷ್ಟಲಿಂಗ ಪೂಜೆಯಂತೂ ಕಡ್ಡಾಯ. ಕುಂಬಾರರು ಮಾಡುವ ಮತ್ತೊಂದು ವಿಶಿಷ್ಟ ಪೂಜೆಯೆಂದರೆ ಕುಂಬೇಶ್ವರ ಪೂಜೆ. ಕುಂಭವು ಈಶ್ವರನೆಂದು ಇವರ ನಂಬಿಕೆ. ಕರ್ನಾಟಕದ ಅನೇಕ ಭಾಗಗಳಲ್ಲಿ ಕುಂಭೇಶ್ವರ ದೇವಾಲಯಗಳಿವೆ. ಧಾರವಾಡ ಜಿಲ್ಲೆಯ ಮುಳಗುಂದದಲ್ಲಿ, ಶಿರಹಟ್ಟಿ ತಾಲ್ಲೂಕಿನ ಯಳವತ್ತಿಯಲ್ಲಿ, ಹೊಳಲ್ಕೆರೆ ತಾಲ್ಲೂಕಿನ ಗುಂಜಸೂರ ಗ್ರಾಮದಲ್ಲಿ, ಹರಿಹರ, ಲಕ್ಕುಂಡಿ, ಶಿವಮೊಗ್ಗ ತಾಲ್ಲೂಕಿನ ಕುಂಸಿಯಲ್ಲಿ, ಕೋಲಾರ ಜಿಲ್ಲೆಯ ಹಲವಾರು ಕಡೆ ಕುಂಭೇಶ್ವರ ದೇವಾಲಯಗಳಿವೆ. ಶಾಸನಗಳಲ್ಲಿಯೂ ಅನೇಕ ಸಲ ಕುಂಭೇಶ್ವರ ಪ್ರಸ್ತಾಪ ಕಂಡುಬರುತ್ತದೆ. ಕುಂಬಾರರು ಬ್ರಹ್ಮನನ್ನು ಭರಮಪ್ಪ ಹೆಸರಿನಿಂದ ಅನೇಕ ಗ್ರಾಮಗಳಲ್ಲಿ ಪೂಜಿಸುತ್ತಿರುವುದು ತಿಳಿದು ಬಂದಿದೆ.
ಆಯಾ ವೃತ್ತಿಯ ಜನರು ತಮ್ಮ ಕಸುಬಿನ ಸಾಧನ ಸಲಕರಣೆಗಳನ್ನು ಪೂಜಿಸುವಂತೆ ಕುಂಬಾರರು ಕೂಡ ತಮ್ಮ ಕಸುಬಿನ ಸಲಕರಣೆಗಳಾದ ಸೊಳಕಲ್ಲು, ತಿಗುರಿ, ಮಡಕೆ ಸುಡುವ ಆವಿಗೆಯನ್ನು ಪೂಜಿಸುವ ಪದ್ಧತಿ ಇದೆ.
ತಾಳಿಯ ದಿನದ ಕಾರ್ಯಕ್ರಮವೆಂದರೆ ಗಂಗಮ್ಮನಿಗೆ ( ಬಾವಿ ಇಲ್ಲವೆ ಹಳ್ಳ) ಹೋಗಿ, ಕುಂಬಾರನ ಮನೆಯಿಂದ ತಂದ ಮಗಿ, ಬಿಂದಿಗೆಗಳಲ್ಲಿ ನೀರು ತುಂಬಿಕೊಂಡು ಬರುವರು. ನಾಲ್ಕು ಕಡೆ ಮಗಿಗಳನ್ನಿಟ್ಟು ಹಸಿ ನೂಲು ಕಟ್ಟಿ ಸುರಿಗಿ ತಯಾರು ಮಾಡುವರು. ಸುರಿಗಿಯ ಒಳಾಂಗಣದಲ್ಲಿ ಮಣಿ ಹಾಕಿ, ವಧು-ವರರಿಗೆ ಪ್ರತ್ಯೇಕವಾಗಿ ಅರಿಶಿಣ ಹಚ್ಚಿ ಸ್ನಾನ ಮಾಡಿಸುವರು. ನಂತರ ಗಂಡಿಗೆ ಬಾಸಿಂಗ, ಹೆಣ್ಣಿಗೆ ದಂಡೆ ಕಟ್ಟುವ ಕಾರ್ಯ ನಡೆಯುವುದು.
ಮದುವೆಯಲ್ಲಿ ತಾಳಿ ಕಟ್ಟಿದ ಮೇಲೆ ಹಾಲು ಧಾರೆ ಎರೆಯುವ ಕ್ರಮಕ್ಕೆ “ಹಾಲು ಹಾಕುವುದು” ಎನ್ನುವರು. ಇದು ದಕ್ಷಿಣ ಮತ್ತು ಮಧ್ಯ ಕರ್ನಾಟಕದ ಲಿಂಗವಂತ ಕುಂಬಾರರಲ್ಲಿ ಇದೆ. ಉತ್ತರ ಕರ್ನಾಟಕದ ಕುಂಬಾರರಲ್ಲಿ ಈ ಪದ್ಧತಿ ಇಲ್ಲ. ಗಂಡ ಸತ್ತ ಹೆಣ್ಣು ಮರುಮದುವೆಯಾಗುವುದನ್ನು “ಸೀರೆ ಉಡಕಿ” ಎನ್ನುವರು.
ಕುಂಬಾರ ವೃತ್ತಿ:
ಭೂಮಿಯ ಮೇಲ್ಪದರಿನ ಎಲ್ಲಾ ಪ್ರದೇಶದ ಮಣ್ಣು ಮಡಕೆ ಮಾಡುವ ಗುಣಧರ್ಮವನ್ನು ಹೊಂದಿರುವುದಿಲ್ಲ. ಆದ್ದರಿಂದ ಅಂತಹ ಮಣ್ಣನ್ನು ಬಲಪಡಿಸಲು ಕೆಲವೊಂದು ಖನಿಜಗಳನ್ನು ಸೇರಿಸಬೇಕಾಗುತ್ತದೆ.
ಹಸಿಮಣ್ಣಿನ ಮಡಕೆಗಳನ್ನು ಆವಿಗೆಯಲ್ಲಿಟ್ಟು ಸುಡಲು ಉರವಲು ಬಹಳ ಮುಖ್ಯ. ಕುಂಬಾರರು ಸಾಮಾನ್ಯವಾಗಿ ಸ್ಥಳೀಯವಾಗಿ ದೊರಯುವ ಕಟ್ಟಿಗೆ, ಮುಳ್ಳು, ಬೇಸಾಯದ ತ್ಯಾಜ್ಯ ವಸ್ತುಗಳನ್ನು ಕೂಡ ಮಡಿಕೆಗಳನ್ನು ಸುಡಲು ಬಳಸುವರು.
ಮಡಕೆ ತಯಾರಿಸಲು ತಿಗರಿ, ಸೊಳ, ಕೋಲು, ಆವಿಗೆ ಮುಖ್ಯ ಉಪಕರಣಗಳು. ಈಗ ವಿದ್ಯುತ್ ಚಾಲಿತ ಚಕ್ರ, ಆವಿಗೆಗಳು ಬಂದಿವೆ. ಈ ಉಪಕರಣಗಳನ್ನು ಬಳಸಿ ಕುಂಬಾರನು ಗಡಿಗೆ, ಕೊಡ, ಬಾನಿ ಮೊದಲಾದ ಗೃಹೋಪಯೋಗಿ, ಮಡಕೆ, ಐರಣಿ, ಗುಗ್ಗಳ ಕೊಡ- ಜೋಕುಮಾರ ಮೊದಲಾದ ಸಾಂಸ್ಕೃತಿಕ ಸಂದರ್ಭದ, ಹೂದಾನಿ- ಮುಖವಾಡ ಮೊದಲಾದ ಅಲಂಕಾರಿಕ ಮಡಕೆಗಳನ್ನು ಸಿದ್ಧಪಡಿಸುತ್ತಾನೆ.
ಕರ್ನಾಟಕದಲ್ಲಿ ಕುಂಭೋದ್ಯಮ ಕೇಂದ್ರಗಳು:
ಬೆಳಗಾವಿ ಜಿಲ್ಲೆಯ ಖಾನಾಪುರ, ಬೆಂಗಳೂರು ನಗರ ಮತ್ತು ರಾಮನಗರದಲ್ಲಿಯ ಕುಂಭೋದ್ಯಮ ಕೇಂದ್ರಗಳು ಮುಖ್ಯವಾದವುಗಳು. ಗ್ರಾಮೀಣ ಗುಡಿ ಕೈಗಾರಿಕೆಗಳ ಪುನರುಜ್ಜೀವನಕ್ಕಾಗಿ 1957ರಲ್ಲಿ ಖಾನಾಪುರ ಕೇಂದ್ರ ಆರಂಭವಾಯಿತು. ಈ ಕೇಂದ್ರದಲ್ಲಿ ಆಧುನಿಕ ಭೌತ ಮತ್ತು ರಾಸಾಯನಿಕ ಪ್ರಯೋಗಾಲಯಗಳಿವೆ. ತೈಲ, ಅನಿಲ, ವಿದ್ಯುತ್ ಉಪಯೋಗಿಸುವ ಆಧುನಿಕ ಆವಿಗೆಗಳಿವೆ. ವಿದ್ಯುತ್ ಚಾಲಿತ ಚಕ್ರಗಳಿವೆ. ದೇಶದ ನಾನಾ ಭಾಗಗಳಿಂದ ಕುಂಭಕಲೆಯ ತರಬೇತಿಗಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ತರಬೇತಿ ಅವಧಿಯಲ್ಲಿ ಅವರಿಗ ಸ್ಟೈಪಂಡ್ ನೀಡಲಾಗುವುದು. ಹಾಸ್ಟೆಲಿನ ಸೌಕರ್ಯ ಕೂಡ ಇದೆ. ಈ ಕಾರ್ಯಾಗಾರದಲ್ಲಿ ಆಧುನಿಕ ಕುಂಭಕಲೆಯ ಕುರಿತು ತರಬೇತಿ ನೀಡಲಾಗುವುದು. ಕುಂಭಕಲೆಯಲ್ಲಿ ಆರು ತಿಂಗಳ ಮತ್ತು ವರ್ಷಾವಧಿಯ ತರಬೇತಿಗಳಲ್ಲದೆ, ವಿಶೇಷ ಉಪನ್ಯಾಸಕ್ಕಾಗಿ ದೇಶ, ವಿದೇಶದ ಕುಂಭ ಪರಿಣಿತರನ್ನು ಆಹ್ವಾನಿಸುವ ಏರ್ಪಾಡು ಇದೆ. ಖಾನಾಪುರ ಕೇಂದ್ರ ದೇಶದಲ್ಲಿಯೇ ಅತ್ಯಂತ ಉತ್ತಮ ಕುಂಭ ಕಲೆಯ ಕೇಂದ್ರವೆಂದು ಹೇಳಬಹುದು. ಇಲ್ಲಿ ಮಾಸ್ಟರ್ ಪಾಟರ್ ತರಬೇತಿ ಪಡೆದ ಲಕ್ಷ್ಮಣಗೌಡ ಕುಂಬಾರ ಇವರ ಕುಂಬಾರಿಕೆಯ ಕುಶಲ ಕೆಲಸಕ್ಕೆ 1999ರಲ್ಲಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರಿಂದ ರಾಷ್ಟ್ರೀಯ ಪುರಸ್ಕಾರ ದೊರೆಯಿತು.
ಬೆಂಗಳೂರು ಪಾಟರಿ ಟೌನ್ ಎಂದು ಹೆಸರು ಪಡೆದಿದೆ. ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ನುರಿತ ಕುಂಬಾರರಿದ್ದಾರೆ. ರಾಮನಗರ ಕೇಂದ್ರದಲ್ಲಿ ತಯಾರಾಗುವ ಟೆರ್ರಾಕೊಟ ಮಣ್ಣಿನ ವಸ್ತುಗಳು ಪರದೇಶಕ್ಕೆ ರಫ್ತಾಗುತ್ತವೆ.
ಯಂತ್ರ ನಾಗರಿಕತೆಯಿಂದಾಗಿ ಗ್ರಾಮೀಣ ಕಸಬುಗಳೆಲ್ಲ ನೆಲಕಚ್ಚಿದವು. ಅದಕ್ಕೆ ಕುಂಬಾರಿಕೆ ಹೊರತಾಗಿಲ್ಲ. ಅಲ್ಯೂಮಿನಿಯಂ ಮತ್ತು ಪ್ಲಾಸ್ಟಿಕ್ ಬಲಕೆಯಿಂದಾಗಿ ಕುಂಬಾರಿಕೆಗೆ ದೊಡ್ಡ ಪೆಟ್ಟಾಯಿತು. ನಗರೀಕರಣದಿಂದಾಗಿ ಮಡಕೆ ಮಾಡುವ ಮಣ್ಣು, ಉರುವಲಿಗೆ ಬೇಕಾದ ಕಟ್ಟಿಗೆ ಕೂಡ ಸಿಗುವುದು ದುರ್ಲಭವಾಯಿತು. ಹಾಗೂ ಹೀಗೂ ಮಾಡಿದರೂ ಅವುಗಳನ್ನು ಕೊಂಡುಕೊಳ್ಳುವವರು ಇಲ್ಲವಾಗಿ, ಕುಂಬಾರರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಬೇಸಾಯ ಮಾಡಲು ಹೊಲವಿಲ್ಲ, ಕುಂಬಾರಿಕೆಗೆ ಬಲವಿಲ್ಲ.
ಆಧುನಿಕತೆಯತ್ತ ಕುಂಬಾರ ವೃತ್ತಿ:
ಕುಂಬಾರಿಕೆ ಗ್ರಾಮೀಣ ಪ್ರದೇಶದಲ್ಲಿ ನೆಲ ಕಚ್ಚಿದೆಯಾದರೂ, ನಗರ ಪ್ರದೇಶಗಳಲ್ಲಿ ಹೊಸ ರೂಪ ತಳೆದು ಮರುಜೀವ ಪಡೆಯುತ್ತಿದೆ. ಕುಂಬಾರಿಕೆ ಅಡಿಗೆ ಮನೆಯಿಂದ ಅಲಮಕರಣ ಜಗತ್ತಿಗೆ ಜಿಗಿದಿದೆ. ಸ್ಟಾರ್ ಹೊಟೆಲಿನಲ್ಲಿ, ದೊಡ್ಡ ದೊಡ್ಡ ಮಹಲುಗಳಲ್ಲಿ ಮಿಂಚತೊಡಗಿದೆ. ತೋಟಗಾರಿಕೆಯು ಇದಕ್ಕೆ ದೊಡ್ಡ ಆಸರೆಯಾಗಿದೆ. ಹೂದಾನಿಗಳು, ನೀರು ತುಂಬಿಡುವ ಹೂಜಿಗಳು, ನೀರನ್ನು ತಂಪಾಗಿಡುವ ಫ್ರಿಜ್, ತರಕಾರಿ ಇಡುವ ಶೀತಕ, ತಂದೂರಿ ಒಲೆಗಳಿಗೆ ಬೇಡಿಕೆ ಬಂದಿದೆ. ಅಲಂಕಾರಿಕ ವಸ್ತುಗಳಾದ ಆನೆ, ಒಂಟೆ, ಮುಖವಾಡಗಳು, ದೀಪಧಾರಿಗಳು, ಲ್ಯಾಂಪಗಳು, ಪೆನ್ ಸ್ಟ್ಯಾಂಡ್ ಮುಂತಾದ ಟೆರ್ರಕೊಟಾ ವಸ್ತುಗಳಿಗೆ ಬೇಡಿಕೆ ಹೆಚ್ಚಾಗ ತೊಡಗಿದೆ. ಕುಂಬಾರಿಕೆಯ ಒಂದು ಭಾಗವಾದ ಗ್ಲೇಜ್ಡ್ ಹಂಚುಗಳಿಗೆ, ಮಾಡಿನ ಹಂಚುಗಳಿಗೆ, ಪಿಂಗಾನಿಯ ಪಾತ್ರೆಗಳಿಗೆ ಬೇಡಿಕೆ ಕಡಿಮೆ ಏನಿಲ್ಲ. ಆದರೆ ಇವೆಲ್ಲಾ ಬಡ ಕುಂಬಾರನ ಕೈತಪ್ಪಿ ಬಂಡವಾಳಶಾಹಿಗಳ ವಶಕ್ಕೆ ಹೋಗಿವೆ. ಯಂತ್ರ ನಾಗರಿಕತೆ ಕುಂಬಾರನಿಗೆ ವರವಾಗುವ ಬದಲು ಶಾಪವಾಗಿದೆ.
ಕುಂಬಾರ ಜನಾಂಗದ ಗಣ್ಯರು:
ಲಿಂಗಾಯತ ಕುಂಬಾರ ಜನಾಂಗದಲ್ಲಿ ಕುಂಬಾರ ಗುಂಡಯ್ಯ, ಇವನ ಪುಣ್ಯಸ್ತ್ರೀ ಕೇತಲದೇವಿ ತುಂಬಾ ಪ್ರಸಿದ್ಧ ಪ್ರಾಚೀನ ಶರಣರು. 15ನೆಯ ಶತಮಾನದ ಸರ್ವಜ್ಞ ಕನ್ನಡ ಸಾಹಿತ್ಯದಲ್ಲಿಯೇ ಏಕಮೇವಾದ್ವಿತೀಯ ಸಂತಕವಿ. ಇತ್ತೀಚಿಗಿನ ಬಳ್ಳಾರಿ ಜಿಲ್ಲೆಯ ಸಿಂಧಗೇರಿ ಶರಣ ಕಂಬಾರ ಮಲ್ಲಪ್ಪ ತಾತ, ಹಾವೇರಿ ಜಿಲ್ಲೆಯ ಮಾವೂರಿನ ಮೌನಿ ಶರಣ ಬಸವಣ್ಣೆಪ್ಪ ಸುಪ್ರಸಿದ್ಧ ಸಂತರಾಗಿ ಬಾಳಿದವರಾಗಿದ್ದಾರೆ.
ಕಲೆ ಕುಂಬಾರನ ಹುಟ್ಟಿನಿಂದಲೇ ಬಂದಿದೆ. ಕೆಸರು ಅವನ ಕೈಚಳಕದಿಂದ ಕಲೆಯಾಗುತ್ತಿದೆ. ಹಾರ್ನಳ್ಳಿಯ ಬಾನಿಗಳು, ಬೇವೂರಿನ ಕುಡಿಕೆ ಮತ್ತು ಗಂಟೆ, ಖಾನಾಪುರ ಮಡಕೆಗಳು, ಲಕ್ಷ್ಮೇಶ್ವರದ ತತ್ರಾಣಿ, ಹರಿಹರದ ಜೂಜಿನ ಕೊಡ, ತೇರದಾಳದ ಒಲೆ, ಮಾಗಡಿ- ಶಿವಮೊಗ್ಗ-ಬೆಳಗಾವಿಯ ಗಣಪತಿ ಪ್ರಸಿದ್ಧವಾಗಿವೆ. ಕುಂಬಾರಿಕೆಯ ಜೊತೆಗೆ ಆಟ, ದೊಡ್ಡಾಟ, ಗೊಂಬೆಯಾಟ, ನಾಟಕ, ಸಂಗೀತ, ಚಿತ್ರಕಲೆ, ಹೀಗೆ ಅನೇಕ ಕಲೆಗಳಲ್ಲಿ ಪರಿಣಿತರಾರದ ಕುಂಬಾರರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ವಾದ್ಯಗಳ ಕಲಾ ಪ್ರೌಢಿಮೆಯಲ್ಲಿ ಹೆಸರು ಪಡೆದವರಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕರಡಿ ವಾದ್ಯ ಬಾರಿಸುವುದು ಅವರ ಜನ್ಮಸಿದ್ಧ ಕಲೆಯಾಗಿದೆ. ಗ್ರಾಮಗಳಲ್ಲಿ ಕುಂಬಾರನಿಲ್ಲದ ಭಜನೆ ಮೇಳಗಳೇ ಇರುವುದಿಲ್ಲ. ವೀರಭದ್ರದೇವರ ಗುಗ್ಗಳ ಸಮಯದಲ್ಲಿ ಸಮಾಳ ಬಾರಿಸುವುದರಲ್ಲಿಯೂ ಕುಂಬಾರರು ಎತ್ತಿದ ಕೈ. ಪುರವಂತಿಕೆ ಮಾಡುವುದರಲ್ಲಿಯೂ ನಿಷ್ಣಾತರು. ಐರಾಣಿಯ ಗಡಿಗೆಗಳ ಜೊತೆಯಲ್ಲಿ ಬಾಸಿಂಗವನ್ನು ಕೂಡ ಮಾಡುವರು.
ಲಿಂಗಾಯತ ಕುಂಬಾರರಲ್ಲಿ ಅತ್ಯಂತ ಪ್ರಸಿದ್ಧ ಚಿತ್ರಕಾರನೊಬ್ಬ ಬೆಳಕಿಗೆ ಬಾರದ ಕರುನಾಜನಕ ಕಥೆಯಿದೆ. ವಿಜಾಪುರ ಜಿಲ್ಲೆಯ ಕೋಟ್ಯಾಳದ ಬಡ ಕುಂಬಾರನ ಮನೆಯಲ್ಲಿ ಸುಮಾರು 1902-1906ರಲ್ಲಿ ಜನಿಸಿದ ಭರಮಣ್ಣಪ್ಪ ಕುಂಬಾರನೇ ಆ ನತದೃಷ್ಟ. ಕಲಾಶಾಲೆಯ ಮೆಟ್ಟಿಲು ಹತ್ತದ ಭರಮಣ್ಣ ಹುಟ್ಟು ಕಲಾವಿದನಾಗಿದ್ದ. ಯೋಗಾಯೋಗವೆಂಬಂತೆ ಸ್ವತಃ ಚಿತ್ರಕಲಾವಿದರಾಗಿದ್ದ ಔಂದ್ ಸಂಸ್ಥಾನದ ರಾಜಾ ಶ್ರೀ ಬಾಳಾಸಾಹೇಬ್ ಪಂತ ಅವರ ಗಮನಕ್ಕೆ ಆಕಸ್ಮಿಕವಾಗಿ ಕುಂಬಾರ ಭರಮಣ್ಣಪ್ಪನ ಚಿತ್ರಗಳು ಬಂದವು. ಕೂಡಲೇ ಭರಮಣ್ಣಪ್ಪನನ್ನು ರಾಜಮರ್ಯಾದೆಯೊಂದಿಗೆ ಬರಮಾಡಿಕೊಂಡು, ಆಸ್ಥಾನ ಕಲಾವಿದನನ್ನಾಗಿ ಮಾಡಿದರು. ಅರಮನೆಯಲ್ಲಿದ್ದುಕೊಂಡು ಭರಮಣ್ಣ ವೈವಿಧ್ಯಮಯ ಕಲಾಕೃತಿಗಳನ್ನು ರಚಿಸಿದ. ಭಾರತದ ಮೌಲಿಕ ಗ್ರಂಥಗಳಲ್ಲಿನ ಚಿತ್ರಗಳನ್ನು ರಚಿಸಿದ. ಅರಮನೆ, ಗುರುಮನೆಗಳಲ್ಲದೆ ಆತನ ಚಿತ್ರಗಳು ದೇಶದ ತುಂಬಾ ಹರಡಿದವು. ಕಲಾಸೇವೆಯಿಂದ ತೃಪ್ತನಾದ ರಾಜನು ಭರಮಣ್ಣನಿಗೆ ‘ಚಂದ್ರವರ್ಮ’ ಎಂಬ ಬಿರುದನ್ನು ನೀಡಿ, ಕೈಗೆ ಬಂಗಾರದ ಖಡೆ ಹಾಕಿ ರಾಜ ಮರ್ಯಾದೆಯಿಂದ ಸನ್ಮಾನಿಸಿದನು.
ವೀರಶೈವ ಧರ್ಮದ ಅನೇಕ ಪ್ರಸಂಗಗಳು, ಶಿವಲೀಲೆಗಳು, ಶರಣರ ಪವಾಡಗಳು, ಕೋಳೂರು ಕೊಡಗೂಸು, ಗೊಲ್ಲಾಳೇಶ್ವರ ಮಹಿಮೆ, ಭಕ್ತ ಸಿರಿಯಾಳ, ಶರಣ ಬಸವೇಶ್ವರ, ಬಸವೇಶ್ವರ, ಚನ್ನಬಸವೇಶ್ವರ, ದತ್ತಾತ್ರೇಯ, ಶಿವಾಜಿ, ಸರಸ್ವತಿ, ಶಿಲಾಬಾಲಕಿಯರು, ರಾಜಮಹರಾಜರುಗಳು… ಹೀಗೆ ಇವನು ಸಾವಿರಾರು ಚಿತ್ರಗಳನ್ನು ರಚಿಸಿದ್ದು ತಿಳಿದು ಬರುತ್ತದೆ.
ಸ್ವಾತಂತ್ರ್ಯಾ ನಂತರ ಔಂದ್ ಸಂಸ್ಥಾನ ಕೈಬಿಟ್ಟಿದ್ದರಿಂದ ಚಂದ್ರವರ್ಮನು ಆಸ್ಥಾನವನ್ನು ತೊರೆಯಬೇಕಾದ ಕಹಿ ಪ್ರಸಂಗ ಒದಗಿತು. 1957ರಲ್ಲಿ ತೀವ್ರ ಸ್ವರೂಪದ ಕಾಯಿಲೆಯಿಂದ 50ನೆಯ ವಯಸ್ಸಿಗೆ ರಾಜಾಶ್ರಯ ತಪ್ಪಿದ ಭರಮಣ್ಣ ಕುಂಬಾರ ಅನಾಥನಾಗಿ ಕಾಲಗರ್ಭ ಸೇರಬೇಕಾಯಿತು.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸರ್ವಜ್ಞನ ನಂತರ ಸುಮಾರು 500 ವರ್ಷಗಳ ಕಾಲ ಲಿಂಗವಂತ ಕುಂಬಾರರು ಕಾಣುತ್ತಿಲ್ಲ. ಆ ಬಳಿಕ ಕಾಣುವ ಮೊದಲ ಸಾಹಿತಿಯೆಂದರೆ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಕುಂಬಾರ ಹಾಲಪ್ಪ ಮತ್ತು ಕೊಟ್ರಮ್ಮ ದಂಪತಿಗಳ ಮಗ ಕುಂಬಾರ ವೀರಭದ್ರಪ್ಪ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಇವರ ‘ಅರಮನೆ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಕುಂವಿ ಎಂದೇ ಖ್ಯಾತರಾಗಿರುವ ಇವರು ನವ್ಯೋತ್ತರ ಕಥಾಪ್ರಪಂಚದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಕುಂಬಾರ ಜನಾಂಗ ಕುರಿತ ‘ಕುಂಬಕಲ್ಪ’ ಹೆಸರಿನ ಮಾಸಪತ್ರಿಕೆಯನ್ನು ಲಿಂಗವಂತ ಕುಂಬಾರರಾದ ನೀಲಕಂಠಪ್ಪ ಕುಂಬಾರ ಇವರು ಗದಗ-ಬೆಟಗೇರಿಯಿಂದ ಪ್ರಕಟಿಸುತ್ತಲಿದ್ದಾರೆ. ಕರ್ನಾಟಕ ವಿಶ್ವವಿದ್ಯಾನಿಲಯದ ಗ್ರಂಥಾಲಯ ವಿಜ್ಞಾನದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ, ಸೇವೆ ಸಲ್ಲಿಸಿ ಗ್ರಂಥಾಲಯ ವಿಭಾಗದ ರೂವಾರಿ ಎನಿಸಿದ ಡಾ. ಎಂ.ಆರ್.ಕುಂಬಾರ ಅವರು ಗ್ರಂಥಾಲಯ ವಿಜ್ಞಾನದಲ್ಲಿ ಗುರು-ಶಿಷ್ಯ ಪರಂಪರೆಯ ನಿರ್ಮಾಪಕರೆನಿಸಿದ್ದಾರೆ. ಇವರ ಮುಂದುವರಿಕೆಯಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆದ ಗಣ್ಯವ್ಯಕ್ತಿಯೆಂದರೆ ಇದೇ ವಿಶ್ವವಿದ್ಯಾಲಯದ ಸುಪ್ರಸಿದ್ಧ ಪ್ರಾಧ್ಯಾಪಕ ಡಾ.ಸಿ.ಆರ್. ಕರಿಸಿದ್ದಪ್ಪ ಕುಂಬಾರ ಅವರು. ಅವರಂತೆ ಅಮೆರಿಕಾ ದೇಶದ ನ್ಯೂಯಾರ್ಕ್ ನಗರದ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ಮಹಾದೇವ ಕುಂಬಾರರು ಒಬ್ಬರು. ಅವರ ಐದಾರು ಕುಟುಂಬಗಳ ವಂಶಸ್ಥರು ಅಮೆರಿಕೆಯಲ್ಲಿದ್ದಾರೆ.
ಈ ಸಮಾಜದಲ್ಲಿ ತಪ್ಪದೇ ಹೆಸರಿಸಬೇಕಾದವರು, ಶ್ರೀ ಮಾಗಡಿ ಶಿವಣ್ಣನವರು. ಇವರು ದಾವಣಗೆರೆಯ ನಿಟುವಳ್ಳಿ ಭಾಗದ ಸಿದ್ಧಲಿಂಗೇಶ್ವರ ಬಡಾವಣೆಯಲ್ಲಿಯ ಬೃಹತ್ ಸಿದ್ಧಗಂಗಾ ಪ್ರೌಢಶಾಲೆಯ ರೂವಾರಿಯಾಗಿದ್ದಾರೆ. ನಮ್ಮ ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಇದರ ಏಳ್ಗೆಗೆ ಹೆಂಡತಿ, ಮಕ್ಕಳು, ಸೊಸೆ, ಇಡೀ ಕುಟುಂಬವೇ ಅರ್ಪಿಸಿಕೊಂಡಿದೆ.
ಕರ್ನಾಟಕದಲ್ಲಿ ಹೆಸರಿಸಬಹುದಾದ ಇನ್ನೆರಡು ಪ್ರಾಥಮಿಕ ಶಿಕ್ಷಣ ಸಂಸ್ಥೆಗಳೆಂದರೆ ಬೆಳಗಾವಿಯಲ್ಲಿ ಸಂಗೂತಾಯಿ ಕಟ್ಟೀಮನಿ ನಡೆಸುತ್ತಿರುವ ಕಾನ್ವೆಂಟ್ ಮಾದರಿಯ ವಾಯ್. ಕೆ. ಕಟ್ಟೀಮನಿ ವಿದ್ಯಾಸಂಸ್ಥೆ, ಮತ್ತೊಂದು ಹಾಸನದಲ್ಲಿ ಶಂಕರ್ ಕುಂಬಾರ ನಡೆಸುತ್ತಿರುವ ಸರ್ವಜ್ಞ ವಿದ್ಯಾಸಂಸ್ಥೆ ಎಂದು ಹೇಳಬಹುದು.
ಲಿಂಗವಂತ ಕುಂಬಾರ ಜನಾಂಗದಲ್ಲಿ ಮೊದಲ ಡಾಕ್ಟರೇಟ್ ಪದವಿ ಪಡೆದ ಕೀರ್ತಿ ಹಾಸನದ ದೇವರಾಜ್ ಸರ್ಕಾರ್ ಅವರಿಗೆ ಸಲ್ಲುತ್ತದೆ. ಇವರು ಜೀವಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಹಲವಾರು ವರುಷ ಪ್ರಾಧ್ಯಾಪಕರಾಗಿ ದುಡಿದು ನಿವೃತ್ತರಾದರು.
ರಾಜಕೀಯ ಕ್ಷೇತ್ರದಲ್ಲಿ ಲಿಂಗವಂತ ಕುಂಬಾರರು ಇಲ್ಲವೆಂದೇ ಹೇಳಬಹುದು. ಒಂದು ಸಮಾಧಾನದ ಸಂಗತಿಯೆಂದರೆ ಮಹಾರಾಷ್ಟ್ರದ ಕೊಲ್ಲಾಪುರದ ರತ್ನಪ್ಪ ಕುಂಬಾರ ಮಹಾರಾಷ್ಟ್ರ ರಾಜ್ಯ ಸರ್ಕಾರದ ಮಂತ್ರಮಂಡಲದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದರು. ಇದಲ್ಲದೆ ಮಹಾರಾಷ್ಟ್ರ ರಾಜ್ಯದ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿ, ಅನೇಕ ಸಂಘಸಂಸ್ಥೆಗಳ ಅಧ್ಯಕ್ಷರಾಗಿ ಜನಹಿತ ಕಾರ್ಯಗಳನ್ನು ಮಾಡಿ ಹೆಸರು ಗಳಿಸಿದವರು.
ಕರ್ನಾಟಕದಲ್ಲಿ ಮೀಸಲಾತಿಯಿಂದಾಗಿ ಕುಂಬಾರ ಸಮಾಜದ ಪುರುಷರು, ಮಹಿಳೆಯರು ತಾಲ್ಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಅಲ್ಲಲ್ಲಿ ಸದಸ್ಯರಾಗಿರುವುದು, ಅಧ್ಯಕ್ಷರಾಗಿರುವುದು ಕಂಡುಬರುತ್ತಿದೆ.
ಜಾಗ್ರತೆಯ ಹೊಸ್ತಿಲಲ್ಲಿ…
ಮೂರು-ನಾಲ್ಕು ದಶಕದ ಕೆಳಗೆ ಶಿಕ್ಷಣ ಕ್ಷೇತ್ರದಲ್ಲಿ ತುಂಬಾ ಹಿಂದುಳಿದಿದ್ದ, ಲಿಂಗವಂತ ಕುಂಬಾರ ಜನಾಂಗದಲ್ಲಿದ್ದ ಜಾಗೃತಿಯ ಗಾಳಿ ಬೀಸ ತೊಡಗಿದೆ. ವೈದ್ಯರು, ಎಂಜಿನಿಯರ್, ವಕೀಲರು, ಪ್ರಾಧ್ಯಾಪಕರು, ನ್ಯಾಯಾಧೀಶರು ಮೊದಲಿಗೆ ಬೆರಳೆಣಿಕೆಯಷ್ಟು ಜನ ಕೂಡ ಇರಲಿಲ್ಲ. ಈಗ ಹೆಚ್ಚಿಲ್ಲವಾದರೂ ಕಡಿಮೆ ಸಂಖ್ಯೆಯಲ್ಲಾದರೂ ಇದ್ದಾರೆ. ಇತ್ತೀಚೆಗೆ ಸಾಕಷ್ಟು ಸಂಖ್ಯೆಯಲ್ಲಿ ಯುವತಿ-ಯುವಕರು ಉನ್ನತ ಅಭ್ಯಾಸದಲ್ಲಿ ತೊಡಗಿದ್ದಾರೆ. ಅನೇಕ ಲಿಂಗವಂತ ಕುಂಬಾರರು ವೈದ್ಯರಾಗಿ, ಎಂಜಿನಿಯರ್ ಆಗಿ, ಪ್ರಾಧ್ಯಾಪಕರಾಗಿ, ನ್ಯಾಯವಾದಿಗಳಾಗಿ, ನ್ಯಾಯಾಧೀಶರಾಗಿ ಪರದೇಶದಲ್ಲಿ ನೆಲೆಸಿರುವುದು ತಿಳಿದುಬರುತ್ತದೆ. ವ್ಯಾಪಾರ, ಉದ್ದಿಮೆ, ಒಕ್ಕಲುತನದಲ್ಲಿ ಇವರ ಪ್ರಗತಿ ಏನೂ ಇಲ್ಲವೆಂದೇ ಹೇಳಬಹುದು. ಗ್ರಾಮೀಣ ಪ್ರದೇಶದ ಕುಂಬಾರರ ಸ್ಥಿತಿ ಬಹಳ ಶೋಚನೀಯವಾಗಿದೆ. ಕುಂಬಾರಿಕೆಗೆ ಮಾನ್ಯತೆಯೂ ಇಲ್ಲ, ಬೆಲೆಯೂ ಇಲ್ಲ. ಬಹಳಷ್ಟು ದುಃಸ್ಥಿತಿಯಲ್ಲಿರುವ ಇವರಿಗೆ ಸರ್ಕಾರದಿಂದ ದೊರೆಯಬಹುದಾದ ಸವಲತ್ತುಗಳನ್ನು ಕೂಡ ಪಡೆಯಲು ಸಾಧ್ಯವಾಗದೆ, ಅಸಹಾಯಕ ಸ್ಥಿತಿಯಲ್ಲಿ ದಿನ ನೂಕುತ್ತಿದ್ದಾರೆ. ಇವರ ಪ್ರಗತಿಯ ಬಗ್ಗೆ ರಚನಾತ್ಮಕ ಸಮಗ್ರ ಯೋಜನೆಯನ್ನು ಕುಂಬಾರ ಸಮಾಜ, ಕರ್ನಾಟಕ ಸರ್ಕಾರ ಕೈಗೆತ್ತಿಕೊಳ್ಳುವುದು ಅವಶ್ಯವಿದೆ.
ನೆರವು:
1. ಕುಂಬಾರ ಜನಾಂಗೀಯ ಅಧ್ಯಯನ- ಬಸವರಾಜ ಕುಂಚೂರು
2. ಹೊಸತು ಹೊಸತು- ಡಾ.ಎಂ. ಚಿದಾನಂದಮೂರ್ತಿ
3. ಕುಂಬಾರ ವೃತ್ತಿ ಪದಕೋಶ- ಎಸ್. ಎಸ್. ಅಂಗಡಿ