ಶ್ವಾನಕ್ಕೆ ಬಳೆಗಳನ್ನು ತೊಡಿಸಿ ಹೂವಿನ ಹಾರವನ್ನೂ ಹಾಕಿದ್ದರು. ಅಲ್ಲದೇ, ಶ್ವಾನದ ತಂದೆಯ ಸ್ಥಾನ ವಹಿಸಿದ್ದ ಮಲ್ಲಿಕಾರ್ಜುನ ಭೃಂಗಿಮಠ ಮಗಳಿಗೆ ಉಡುಗೊರೆ ನೀಡುವಂತೆ ಸೀರೆ, ಬಂಗಾರ, ಬಳೆಗಳು, ಹೂವನ್ನು ನೀಡುವ ಮೂಲಕ ಉತ್ತಮ ಸಂದೇಶ ಸಾರಿದರು.
ವಿಜಯಪುರ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮನುಷ್ಯರು ಸೀಮಂತ ಕಾರ್ಯಕ್ರಮ ಆಯೋಜಿಸುವುದು ಸಾಮಾನ್ಯ. ಹಸುಗಳಿಗೂ ಗೋವು ಪ್ರೀಯರು ಸೀಮಂತ ಮಾಡಿದ ಉದಾಹರಣೆಗಳುಂಟು. ಆದರೆ, ಅತೀ ನಂಬಿಕಸ್ತ ಪ್ರಾಣಿಗೆ ಸೀಮಂತ ನಡೆಸುವ ಮೂಲಕ ಬಸವನಾಡಿನ ಜನ ಗಮನ ಸೆಳೆದಿದ್ದಾರೆ. ವಿಜಯಪುರದ ಕನ್ನಡ ಪರ ಹೋರಾಟಗಾರ ಪ್ರಕಾಶ ಕುಂಬಾರ ತಮ್ಮ ಮನೆಯ ಸಾಕು ನಾಯಿ ಸೋನು ಹೆಸರಿನ ಶ್ವಾನಕ್ಕೆ ಸೀಮಂತ ನಡೆಸುವ ಮೂಲಕ ಪ್ರಾಣಿ ಪ್ರೀತಿ ಮೆರೆದಿದ್ದಾರೆ. ಈ ಮೂಲಕ ಎಲ್ಲರೂ ಅಚ್ಚರಿ ಪಡುವ ಕಾರ್ಯ ಮಾಡಿದ್ದಾರೆ. ಪ್ರಕಾಶ ಕುಂಬಾರ ಸುಮಾರು ಆರು ತಿಂಗಳ ಹಿಂದೆ ಪೊಮೆರೇನಿಯನ್ ತಳಿಯ ಶ್ವಾನವನ್ನು ತಂದಿದ್ದರು. ತಂದಾಗಲೇ ಇದು ಗರ್ಭ ಧರಿಸಿತ್ತು. ಈಗ ಆ ಶ್ವಾನ ತುಂಬು ಗರ್ಭಿಣಿಯಾಗಿದೆ. ಮುಂದಿನ 15 ದಿನಗಳಲ್ಲಿ ಮರಿಗಳಿಗೆ ಜನ್ಮ ನೀಡಲಿದೆ. ಈ ಹಿನ್ನೆಲೆಯಲ್ಲಿ ಈ ಒಂದು ಕಾರ್ಯಕ್ರಮವನ್ನು ಸ್ಮರಣೀಯವಾಗಿಸಲು ತೀರ್ಮಾನಿಸಿದರು. ಅದರಂತೆ ಪ್ರಕಾಶ ಕುಂಬಾರ ಹೆಂಡತಿ ವಿಜಯಲಕ್ಷ್ಮಿ ಜೊತೆ ಸೇರಿ ಈ ರೀತಿ ಸೀಮಂತ ಕಾರ್ಯಕ್ರಮ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.
ಈ ಸೀಮಂತ ಕಾರ್ಯಕ್ರಮದಲ್ಲಿ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಶ್ವಾನದ ತಂದೆಯ ಸ್ಥಾನದಲ್ಲಿ ನಿಂತು ನಾಯಿಗೆ ಉಡುಗೊರೆ ನೀಡಿ ಸಂಭ್ರಮಿಸಿದರು. ಪ್ರಕಾಶ ಕುಂಬಾರ ಅವರ ತಾಯಿ ಮಹಾದೇವಿ ಕುಂಬಾರ ಸೀಮಂತ ಕಾರ್ಯಕ್ರಮದಲ್ಲಿ ಹೇಳಲಾಗುವ ಹಾಡನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಿದರು.
ಮನುಷ್ಯರು ಮಾಡುವಂತೆ ಈ ಕಾರ್ಯಕ್ರಮದಲ್ಲಿಯೂ ಜನ ಸೇರಿದ್ದರು. ಶ್ವಾನವನ್ನು ಸ್ವಚ್ಛಗೊಳಿಸಿ ಅದಕ್ಕೆ ಬಳೆಗಳನ್ನು ತೊಡಿಸಿ ಹೂವಿನ ಹಾರವನ್ನೂ ಹಾಕಿದ್ದರು. ಅಲ್ಲದೇ, ಶ್ವಾನದ ತಂದೆಯ ಸ್ಥಾನ ವಹಿಸಿದ್ದ ಮಲ್ಲಿಕಾರ್ಜುನ ಭೃಂಗಿಮಠ ಮಗಳಿಗೆ ಉಡುಗೊರೆ ನೀಡುವಂತೆ ಸೀರೆ, ಬಂಗಾರ, ಬೆಳ್ಳಿ, ಬಳೆಗಳು, ದಂಡಿ, ಹೂವನ್ನು ನೀಡುವ ಮೂಲಕ ಉತ್ತಮ ಸಂದೇಶ ಸಾರಿದರು.
ಅಲ್ಲದೇ, ಭಾರತೀಯ ಸಂಸ್ಕೃತಿಯಲ್ಲಿ ಪ್ರಾಣಿದಯೆ ಕಾರ್ಯಕ್ರಮ ಇದಾಗಿದೆ. ಇದರಲ್ಲಿ ಶುನಕದ ತಂದೆಯಾಗಿರುವುದು ತಮ್ಮ ಭಾಗ್ಯ ಎಂದು ತಿಳಿಸಿದರು. ಅಲ್ಲದೇ, ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರಿಗಾಗಿ ಉಪಹಾರದ ವ್ಯವಸ್ಥೆಯನ್ನೂ ಮಾಡುವ ಮೂಲಕ ಸೀಮಂತ ಕಾರ್ಯಕ್ರಮ ನಡೆಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಸಾಮಾಜಿಕ ಹೋರಾಟಗಾರ ದಸ್ತಗೀರ ಸಾಲೋಟಗಿ, ಪ್ರಾಣಿಗಳಿಗೂ ಜೀವವಿರುತ್ತೆ. ಭಾವನೆಗಳಿರುತ್ತವೆ. ಆದರೆ, ಮಾತನಾಡಲು ಬರುವುದಿಲ್ಲ. ಹೀಗಾಗಿ ಈ ಮೂಕ ಪ್ರಾಣಿಗಳಿಗೂ ಕಾರ್ಯಕ್ರಮ ನಡೆಸಬೇಕು ಎಂದು ಯೋಚಿಸಿದ ಪ್ರಕಾಶ ಕುಂಬಾರ ದಂಪತಿ ತಮ್ಮ ಮನೆಯ ಸದಸ್ಯನಂತಿರುವ ಸಾಕುಪ್ರಾಣಿಯ ಸೀಮಂತ ಕಾರ್ಯ ಮಾಡಿ ಗಮನ ಸೆಳೆದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
(ಸುದ್ದಿ ಕೃಪೆ : news18.com)