ಕಾರ್ಕಳ(ಕುಲಾಲ ವರ್ಲ್ಡ್ ಡಾಟ್ ಕಾಮ್): ಕಿತ್ತು ತಿನ್ನುವ ಬಡತನದ ಮಧ್ಯೆ ತನ್ನ ಎರಡೂ ಕಿಡ್ನಿಯನ್ನು ಕಳೆದುಕೊಂಡು ಸಹೃದಯರ ಸಹಾಯವನ್ನು ಎದುರು ನೋಡುತ್ತಿದ್ದ ತಾಯಿಯೊಬ್ಬರ ಖಾತೆಗೆ ದಾನಿಗಳು ಹಾಕಿದ 29,800 ರೂಪಾಯಿಯನ್ನು ಕಳ್ಳನೊಬ್ಬ ಯಾಮಾರಿಸಿ ದೋಚಿದ ಹೃದಯ ವಿದ್ರಾವಕ ಘಟನೆ ಕಾರ್ಕಳದಲ್ಲಿ ನಡೆದಿದೆ.

`ಕಿಡ್ನಿ ವೈಫಲ್ಯದಿಂದ ನೊಂದಿರುವ ಸಂಧ್ಯಾ ಮೂಲ್ಯರಿಗೆ ಬೇಕಿದೆ ಮಾನವೀಯ ಸ್ಪಂದನೆ’ ಎಂಬ ಶೀರ್ಷಿಕೆಯಲ್ಲಿ `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ತನ್ನ ಎರಡೂ ಕಿಡ್ನಿಯನ್ನು ಕೆಳೆದುಕೊಂಡಿರುವ ಅಜೆಕಾರು ಸಮೀಪದ ಎಣ್ಣೆಹೊಳೆ ಕೈಕಂಬದ ದಿವಂಗತ ಶೇಖರ ಮೂಲ್ಯ ಅವರ ಪತ್ನಿ ಸಂಧ್ಯಾ ಅವರ ನೋವಿನ ಕಥೆಯನ್ನು ನಿನ್ನೆಯಷ್ಟೇ ಪ್ರಕಟಿಸಿತ್ತು. ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ತನ್ನ ಪತಿಯನ್ನು ಕಳೆದುಕೊಂಡು ಕಿಡ್ನಿ ಚಿಕಿತ್ಸೆಗೂ ಹಣವಿಲ್ಲದೆ ಪರದಾಡುತ್ತಿದ್ದ ಇವರ ಸ್ಥಿತಿಯನ್ನು ನೋಡಿ ಮರುಗಿದ್ದ ದೋಹಾ ಕತಾರ್ ಕುಲಾಲ ಮಿತ್ರರು ಕೂಡಲೇ ಅವರ ಖಾತೆಗೆ 25 ಸಾವಿರ ರೂಪಾಯಿ ಹಣ ಕಳಿಸಿ ಮಾನವೀಯತೆಗೆ ಸಾಕ್ಷಿಯಾಗಿದ್ದರು. ಆದರೆ ದುಃಖದಲ್ಲಿರುವ ವ್ಯಕ್ತಿಗಳಿಗೆ ಮತ್ತೆ ಮತ್ತೆ ದೇವರು ಸಂಕಷ್ಟವನ್ನೇ ತಂದೊಡ್ಡುತ್ತಾನೆ ಎನ್ನುವಂತೆ ಇಂತಹ ಕಷ್ಟದಲ್ಲಿರುವ ವ್ಯಕ್ತಿಗಳನ್ನೇ ಗುರಿಯಾಗಿಸಿ ಕಾರ್ಯಾಚರಿಸುವ ಕಟುಕನೊಬ್ಬ ಸಂಧ್ಯಾ ಅವರನ್ನು ಮಾತಿನ ಮೂಲಕ ಯಾಮಾರಿಸಿ ಖಾತೆಯಲ್ಲಿದ್ದ ಪೂರ್ತಿ ಹಣವನ್ನು ದೋಚಿದ್ದಾನೆ.
ಇಂದು (ಮಾ.28)ಕಿಡ್ನಿ ಡಯಾಲಿಸಿಸ್ ಗಾಗಿ ಕಾರ್ಕಳಕ್ಕೆ ಬಂದಿದ್ದ ಸಂಧ್ಯಾ ಅವರಿಗೆ ಸುಮಾರು ನಾಲ್ಕು ಗಂಟೆಗೆ 9113539946 ನಂಬರಿನಿಂದ ಕನ್ನಡದಲ್ಲಿ ಕರೆ ಮಾಡಿದ ವ್ಯಕ್ತಿ ತಾನು ರಾಘವೇಂದ್ರ ಮಠದ ಸ್ವಾಮೀಜಿ ಎಂದು ಪರಿಚಯಿಸಿ, ಕಿಡ್ನಿ ತೊಂದರೆಯಲ್ಲಿರುವ ನಿಮ್ಮ ವಿಚಾರ ತಿಳಿದು ದುಬೈಯ ಭಕ್ತರೊಬ್ಬರು ಎರಡು ಲಕ್ಷ ರೂಪಾಯಿ ಕಳಿಸಿಕೊಟ್ಟಿದ್ದಾರೆ. ಅದನ್ನು ನಿಮ್ಮ ಖಾತೆಗೆ ಹಾಕಬೇಕಾದರೆ ನಿಮ್ಮ ಖಾತೆ ಸರಿಯಾಗಿದೆಯೇ ಎಂದು ತಿಳಿದುಕೊಳ್ಳಬೇಕು. ಅದಕ್ಕಾಗಿ ಎರಡು ಸಾವಿರ ರೂ. ತನ್ನ ನಂಬರಿಗೆ ಕಳಿಸಿ ಎಂದು ಬಾರೀ ಸೌಮ್ಯ ಮಾತಿನಲ್ಲಿ ಯಾಮಾರಿಸಿದ್ದು, ಹಣ ಕಳಿಸಿದ ಕೂಡಲೇ ಮತ್ತೆ ಕರೆ ಮಾಡಿ ನಿಮ್ಮ ಖಾತೆಯಲ್ಲಿ ಎಷ್ಟು ಇದೆಯೋ ಅಷ್ಟನ್ನು ಕಲಿಸಿದರೆ ಒಂದು ಗಂಟೆಯಲ್ಲಿ ಎರಡು ಲಕ್ಷ ಹಣ ನಿಮ್ಮ ಖಾತೆಗೆ ಬರುತ್ತದೆ ಎಂದು ಹೇಳಿದ್ದಾನೆ. ಆ ಕಟುಕ ಕಳ್ಳನ ಮೋಸದ ಅರಿವಿರದ ಮುಗ್ದರಾದ ಸಂಧ್ಯಾ ಅವರು ಆತನ ಮಾತನ್ನು ಸತ್ಯವೆಂದೇ ನಂಬಿ ಖಾತೆಯಲ್ಲಿದ್ದ 27,800ರೂ ಕಳಿಸಿದ್ದರು. ಗೂಗಲ್ ಪೇ ಬಳಸಲು ತಿಳಿಯದ ಅವರು ಆಸ್ಪತೆಯ ದಾದಿಯೊಬ್ಬರ ಸಹಾಯ ಪಡೆದಿದ್ದು, ಅವರಿಗೂ ಇದು ಮೋಸದ ಜಾಲ ಎಂಬುದು ಅರಿವೇ ಬರದಂತೆ ಕಳ್ಳ ಮೋಡಿ ಮಾಡಿ ಹಣ ಲಪಟಾಯಿಸಿದ್ದಾನೆ. ಆತ ಹೇಳಿದ ಸಮಯಕ್ಕೆ ಹಣ ಬರದೇ ಇರುವುದನ್ನು ಮತ್ತು ತನ್ನ ಮೊಬೈಲ್ ಕರೆ ಸ್ವೀಕರಿಸದೇ ಇರುವಾಗ ಅನುಮಾನದಿಂದ ಇತರರನ್ನು ಸಂಪರ್ಕಿಸಿದಾಗ ಅವರು ಮೋಸ ಹೋಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅವರು ಅಜೆಕಾರು ಪೊಲೀಸ್ ಠಾಣೆ ಹಾಗೂ ಸೈಬರ್ ಕ್ರೈಮ್ ಗೆ ದೂರು ನೀಡಿದ್ದಾರೆ. ಪೊಲೀಸರಿಂದ ಹಣ ದೊರಕಿಸಿಕೊಡುವ ಭರವಸೆಯಷ್ಟೇ ಸಿಕ್ಕಿದೆ.
ಮಕ್ಕಳ ವಿದ್ಯಾಭ್ಯಾಸ ಮತ್ತು ತನ್ನ ಕಿಡ್ನಿ ಚಿಕಿತ್ಸೆಗೆ ಯಾರೋ ಪುಣ್ಯಾತ್ಮರು ಹಣ ಕಳಿಸಿದ್ದಾರೆ, ಸದ್ಯ ತನ್ನ ಕಷ್ಟ ಪರಿಹಾರ ಆಯಿತು ಎಂದು ಆಸೆ ಕಂಗಳಿಂದ ಕಾದಿದ್ದ ಸಂಧ್ಯಾ ಅವರು ಸದ್ಯ ಆಘಾತದಲ್ಲಿದ್ದು, ತನ್ನ ಸ್ಥಿತಿಗಾಗಿ ರೋದಿಸುತ್ತಿದ್ದಾರೆ. ಇಂತಹಾ ಬಡ ತಾಯಿಯ ಹಣ ದೋಚಿದ ಕಳ್ಳ ಅದೆಲ್ಲಿ ಉದ್ಧಾರವಾಗುತ್ತಾನೋ ಭಗವಂತನೇ ಬಲ್ಲ.
ಇದನ್ನೂ ಓದಿ..
ಕಿಡ್ನಿ ವೈಫಲ್ಯದಿಂದ ನೊಂದಿರುವ ಸಂಧ್ಯಾ ಮೂಲ್ಯರಿಗೆ ಬೇಕಿದೆ ಮಾನವೀಯ ಸ್ಪಂದನೆ
https://kulalaworld.com/?p=17012

