ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಪ್ರತಿಭೆ ಯಾರ ಸ್ವತ್ತಲ್ಲ, ಪ್ರತಿಭೆಯ ಜೊತೆಗೆ ಶ್ರಮ, ಸಾಧಿಸುವ ಗುರಿವೊಂದಿದ್ದರೆ ಅವಕಾಶಗಳು ತಾನಾಗಿಯೇ ಬಾಗಿಲು ತೆರೆಯುತ್ತವೆ. ಸಿನಿಮಾರಂಗದಲ್ಲಿ ಯಾವ ಗಾಢ್ ಫಾದರ್ ಇಲ್ಲದೆಯೂ ಹೆಸರು ಮಾಡಬಹುದು, ಪ್ರೇಕ್ಷಕರನ್ನು ಸೆಳೆಯಬಹುದು, ಅವಕಾಶಗಳನ್ನು ಗಿಟ್ಟಿಸಿಕೊಳ್ಳಬಹುದು ಎಂದು ಸಾಬೀತು ಮಾಡಿದ ಕಲಾವಿದ ವಿಶ್ವನಾಥ್ ಅಸೈಗೋಳಿ. ಅಪ್ಪಟ ಗ್ರಾಮೀಣ ಪ್ರತಿಭೆಯಾಗಿರುವ ಇವರು ನಟಿಸಿದ್ದು ಬೆರಳೆಣಿಕೆ ಚಿತ್ರದಲ್ಲಾದರೂ ಮಾಡಿರುವ ಪಾತ್ರಕ್ಕೆ ಜೀವ ತುಂಬಿ ತನ್ನ ಕಲಾ ಜೀವನದ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದಿದ್ದಾರೆ.
ಪ್ರಸ್ತುತ ಸೋಮೇಶ್ವರದ ಕೊಲ್ಯದಲ್ಲಿ ವಾಸವಾಗಿರುವ ವಿಶ್ವನಾಥ್ ಅವರು ಬಂಟ್ವಾಳ ಕರೋಪಾಡಿ ಚೆಂಬಾರ್ಪುವಿನ ಕೃಷ್ಣಪ್ಪ ಸಿ ಎಚ್ ಹಾಗೂ ಶಾಂತಾ ದಂಪತಿಗಳ ಸುಪುತ್ರ. ಇವರು ಮೇ 14, 1971ರಲ್ಲಿ ಕೊಣಾಜೆ ನಾಟೆಕಲ್ ನ ಕೊಪ್ಪಳ ಎಂಬಲ್ಲಿ ಜನಿಸಿದವರು. ಸಣ್ಣ ವಯಸ್ಸಿನಲ್ಲೇ ಮುಖಕ್ಕೆ ಬಣ್ಣ ಹಚ್ಚಿದ ಅವರು ಹಲವು ಪಾತ್ರಗಳನ್ನು ಲೀಲಾಜಾಲವಾಗಿ ಅಭಿನಯಿಸುತ್ತಿದ್ದ ವಿಶ್ವನಾಥ್ ಇಂದು ಭರವಸೆಯ ಕಲಾವಿದನಾಗಿ ರೂಪುಗೊಂಡು ತನ್ನದೇ ಆದ ಹೆಜ್ಜೆ ಗುರುತು ಮೂಡಿಸುತ್ತಿದ್ದಾರೆ. ಶಾಲಾ ಕಾರ್ಯಕ್ರಮಗಳಲ್ಲಿ ಚಿಕ್ಕಪುಟ್ಟ ಪಾತ್ರ ನಿರ್ವಹಿಸುತ್ತಾ ಈ ಕಲೆಯಲ್ಲಿ ಪಳಗುತ್ತಾ ಪಾತ್ರಕ್ಕೆ ಜೀವ ತುಂಬಲು ಯತ್ನಿಸುತ್ತಿದ್ದ ವಿಶ್ವನಾಥ್ ಪದವಿ ಶಿಕ್ಷಣ ಪಡೆಯುತ್ತಿರುವ ಹೊತ್ತಿಗೆ ಹೆಚ್ಚು ನೈಪುಣ್ಯತೆ ಪಡೆದಿದ್ದರು. ಇವರು ಮುಖ್ಯ ಪಾತ್ರದಲ್ಲಿ ನಟಿಸಿರುವ `ಗಿರಿಗಿಟ್’ ತುಳು ಚಿತ್ರ ಮಂಗಳೂರಿನಲ್ಲಿ ಶತದಿನೋತ್ಸವ ಆಚರಿಸುತ್ತಿದೆ.
ದೇರಳಕಟ್ಟೆ ಸರಕಾರಿ ಪ್ರಾಥಮಿಕ ಶಾಲೆ ಹಾಗು ಮುಡಿಪು ಕುರ್ನಾಡು ಕಾಲೇಜಿನಲ್ಲಿ ಪಿಯು ಮುಗಿಸಿ ಮೈಸೂರು ಮುಕ್ತ ವಿವಿಯಲ್ಲಿ ಪದವಿ ಶಿಕ್ಷಣ ಪಡೆದಿರುವ ವಿಶ್ವನಾಥ್ ತನ್ನ ಹನ್ನೊಂದನೇ ವಯಸ್ಸಿನಲ್ಲೇ ನಾಟಕಗಳಲ್ಲಿ ಬಣ್ಣ ಹಚ್ಚಿ ರಂಗದ ಮೇಲೆ ಮಿಂಚಿದ್ದರು. ಐದನೇ ತರಗತಿ ಕಲಿಯುತ್ತಿದ್ದಾಗ `ಇಂಚಲಾ ಉಂಡಾ?” ಎಂಬ ನಾಟಕಕ್ಕೆ ಮೊದಲು ಬಣ್ಣ ಹಚ್ಚಿ ಶಿಕ್ಷಕರು ಹಾಗೂ ಕಲಾಭಿಮಾನಿಗಳಿಂದ ಭೇಷ್ ಅನಿಸಿಕೊಂಡಿದ್ದರು. ಅಲ್ಲಿಂದ ಅವರ ನಾಟಕಗಳಲ್ಲಿ ಅಭಿನಯಿಸುವ ಅಭಿಲಾಷೆ ಹೆಚ್ಚಾಯಿತು. ಚಿತ್ರರಚನೆ ಹಾಗೂ ಯಕ್ಷಗಾನದಲ್ಲಿ ವಿಪರೀತ ಆಸಕ್ತಿ ಬೆಳೆಸಿಕೊಂಡಿದ್ದ ಅವರಿಗೆ ಆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಪೂರಕ ಅವಕಾಶಗಳು ಲಭ್ಯವಾಗಲಿಲ್ಲ. ಸ್ವಂತ ಆಸಕ್ತಿಯಿಂದಲೇ ರಂಗಕಲೆಯಲ್ಲಿ ಹೆಜ್ಜೆ ಇಟ್ಟ ವಿಶ್ವನಾಥ್, ತನ್ನೂರಿನ ಬೇರೆ ಬೇರೆ ನಾಟಕ ತಂಡಗಳಲ್ಲಿ ಹವ್ಯಾಸಿ ಕಲಾವಿದನಾಗಿ ಗುರುತಿಸಿಕೊಂಡರು.
ಬಯ್ಯಮಲ್ಲಿಗೆ, ಕಾವೇರಿ, ಆರತಿ, ಡ್ಯಾಡಿ, ಈ ಪೊಣ್ಣು ಏರ್? , ಗಂಗಾರಾಮ್ ಮೊದಲಾದ ಪ್ರಮುಖ ನಾಟಕಗಳಲ್ಲಿ ವಿವಿಧ ಪಾತ್ರಗಳಲ್ಲಿ ಅಭಿನಯಿಸಿರುವ ವಿಶ್ವನಾಥರಿಗೆ ಸಿನಿಮಾ ರಂಗಕ್ಕೆ ಕಾಲಿಡಬೇಕೆಂಬ ಅದಮ್ಯ ಆಸೆಯಿತ್ತು. ಹಿಂದೆ ಮಂಗಳೂರಿನಲ್ಲಿ ಚಲನಚಿತ್ರ ನಿರ್ಮಾಣ ಕಡಿಮೆ ಇದ್ದುದರಿಂದ ದೂರದ ಬೆಂಗಳೂರಿಗೆ ತೆರಳಿ ಅವಕಾಶ ಗಿಟ್ಟಿಸಿಕೊಳ್ಳುವ ಸಾಮರ್ಥ್ಯ ಅವರಲ್ಲಿರಲಿಲ್ಲ. ನಾಟಕಗಳಲ್ಲಿ ಅಭಿನಯಿಸುತ್ತಾ ಕಲಾ ಕ್ಷೇತ್ರಗಳಲ್ಲಿ ತಮ್ಮ ಅನುಭವವನ್ನು ದೊಡ್ಡದಾಗಿಸಿ ನಟನಾಪ್ರತಿಭೆಯನ್ನು ಮೆರೆದಿರುವ ವಿಶ್ವನಾಥ್ ಅವರು 2015ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆಗೈದರು.
ಇವರ ಬಹುಕಾಲದ ಸಿನಿಮಾದ ಕನಸನ್ನು ಸಾಕಾರಗೊಳಿಸಿದವರು ಖ್ಯಾತ ನಿರ್ದೇಶಕ, ಕಥೆಗಾರ, ನಟರೂ ಆಗಿರುವ ರಾಜ್ ಬಿ ಶೆಟ್ಟಿ ಹಾಗೂ ನಿರ್ಮಾಪಕ ಸುಹಾನ್ ಪ್ರಸಾದ್. 2017ರಲ್ಲಿ ತೆರೆಕಂಡ ಹಾಸ್ಯ ಪ್ರಧಾನ ಕನ್ನಡ ಚಲನಚಿತ್ರ `ಒಂದು ಮೊಟ್ಟೆಯ ಕಥೆ’ ಚಿತ್ರದ ಕಲಾವಿದರ ಆಯ್ಕೆಯ ಆಡಿಷನ್ ನಲ್ಲಿ ಭಾಗವಹಿಸಿ ತನ್ನ ನಟನಾ ಸಾಮರ್ಥ್ಯ ಪ್ರದರ್ಶಿಸಿ ಕಥಾ ನಾಯಕನ ತಂದೆಯ ಪಾತ್ರಕ್ಕೆ ಆಯ್ಕೆಯಾದರು. ಅಲ್ಲದೇ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಸೈ ಅನಿಸಿಕೊಂಡರು. ಆ ಸಿನಿಮಾ ವಿಶ್ವನಾಥ್ ಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಆ ಚಿತ್ರ ಶತದಿನಗಳನ್ನು ಪೂರೈಸಿದ್ದು ಹೋದಲ್ಲೆಲ್ಲಾ ಜನ ಗುರುತಿಸಲು ಆರಂಭಿಸುವ ಮೂಲಕ ಇನ್ನಷ್ಟು ಅವಕಾಶಗಳ ಬಾಗಿಲು ತೆರೆಯಿತು.
ಈ ಚಿತ್ರ ಅವರಿಗೆ ಉತ್ತಮ ಐಡೆಂಟಿಟಿ ತಂದುಕೊಟ್ಟಿದ್ದಲ್ಲದೆ ಒಂದರ ಹಿಂದೆ ಒಂದು ಎನ್ನುವಂತೆ ಹೊಸ ಹೊಸ ಅವಕಾಶಗಳನ್ನು ಕೊಡಿಸಿದವು. ಇತ್ತೀಚೆಗಷ್ಟೇ ತೆರೆಕಂಡ, ಶೀರ್ಷಿಕೆಯಿಂದಾಗಿಯೇ ಗಮನ ಸೆಳೆಯುತ್ತಿರುವ ‘ಲುಂಗಿ’ ಕನ್ನಡ ಚಿತ್ರದಲ್ಲಿ ಕಥಾ ನಾಯಕಿಯ ತಂದೆಯ ಪಾತ್ರ ನಿರ್ವಹಿಸಿ ವಿಶ್ವನಾಥ್ ಪ್ರೇಕ್ಷಕರ ಗಮನಸೆಳೆದಿರುವ ವಿಶ್ವನಾಥ್, `ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸೂಪರ್-ಡೂಪರ್ ಕನ್ನಡ ಚಲನಚಿತ್ರದಲ್ಲಿ ಸ್ಕೂಲ್ ಇನ್ಸ್ಪೆಕ್ಟರ್ ರೋಲ್ ನಲ್ಲಿ ಒಬ್ಬರಾಗಿ ಮಿಂಚಿದ್ದರು. `ಇಂದು ಎಂಥಾ ಲೋಕವಯ್ಯಾ’ ಹಾಗೂ ನಿರ್ದೇಶಕರಾದ ತಮನ್ ರವರ `ದೃಷ್ಠಿ ಗೊಂಬೆ’ ಚಿತ್ರದಲ್ಲಿ (ನಾಯಕಿಯ ದೊಡ್ಡಪ್ಪನಾಗಿ ) ಪ್ರಮುಖ ಪೋಷಕ ಪಾತ್ರದಲ್ಲಿ ನಟಿಸಿ ಜನಮೆಚ್ಚುಗೆ ಪಡೆದಿದ್ದಾರೆ. ಇನ್ನಷ್ಟೇ ತೆರೆ ಕಾಣಲಿರುವ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ನಟನೆಯ `ಮಂಕು ಬಾಯ್ ಫಾಕ್ಸಿ ರಾಣಿ’ ಚಿತ್ರದಲ್ಲೂ ನಾಯಕನ ತಂದೆಯ ಪಾತ್ರವನ್ನು ನಿರ್ವಹಿಸಿದ್ದಾರೆ.
`ಪತ್ತೀಸ್ ಗ್ಯಾಂಗ್’, ”ಇಂಗ್ಲಿಷ್’ ಎಂಬ ತುಳು ಚಲನಚಿತ್ರದಲ್ಲಿ ಗಮನಾರ್ಹ ಪೋಷಕ ನಟರಾಗಿ ವಿವಿಧ ಗೆಟಪ್ನಳ್ಳಿ ಅಧ್ಬುತವಾಗಿ ನಟಿಸಿರುವ ವಿಶ್ವನಾಥ್ ಅಸೈಗೋಳಿ, ಶತದಿನ ಪೂರೈಸಿ ಮುನ್ನುಗ್ಗುತ್ತಿರುವ `ಗಿರಿಗಿಟ್’, ತುಳು ಚಿತ್ರದಲ್ಲಿ ನಾಯಕನ ತಂದೆಯ ಪಾತ್ರದಲ್ಲಿ ತನ್ನ ನೈಜ ನಟನೆಯ ಮೂಲಕ ಪೇಕ್ಷಕರ ಮನಗೆದ್ದಿದ್ದಾರೆ. ಕಲಾವಿದರು ಎಂದ ಮೇಲೆ ಯಾವುದೇ ಪಾತ್ರವಾದರೂ ಸರಿ, ಅದಕ್ಕೆ ಜೀವ ತುಂಬಲು ತಯಾರಿರಬೇಕು. ನಾವು ನಟಿಸುವ ಪಾತ್ರ ಜನರಿಗೆ ಹತ್ತಿರವಾಗುವುದು ಮುಖ್ಯ. , ತನ್ನ ಪಾಲಿಗೆ ಬಂದ ಪಾತ್ರಗಳಿಗೆ ಜೀವ ತುಂಬುವುದಷ್ಟೇ ನನ್ನ ಕೆಲಸ ಎನ್ನುತ್ತಾರೆ.
ಮಂಗಳೂರಿನ ಲಕ್ಷ್ಮೀ ಮೆಮೊರಿಯಲ್ ಎಜುಕೇಷನ್ ಟ್ರಸ್ಟ್ ನ ಟ್ರಾನ್ಸ್ಪೋರ್ಟ್ ಡಿಪಾರ್ಟ್ಮೆಂಟ್ ನ ನಿರ್ವಹಣಾ ಮೇಲ್ವಿಚಾರಕರಾಗಿರುವ ವಿಶ್ವನಾಥ್, ಕೊಲ್ಯ ರೋಟರಿ ಸಮುದಾಯದಳ, ಕೊಲ್ಯ ಕುಲಾಲ ಸಂಘ ಮತ್ತು ದ.ಕ ಕುಲಾಲರ ಮಾತೃಸಂಘದ ಸದಸ್ಯರಾಗಿ, ಕುಲಶೇಖರ ವೀರನಾರಾಯಣ ದೇವಸ್ಥಾನದ ಖಜಾಂಜಿಯಾಗಿ ಸೇವೆ ಸಲ್ಲಿಸಿ ಸಾಮಾಜಿಕ ಚಟುವಟಿಕೆಗಳಲ್ಲೂ ಗುರುತಿಸಿಕೊಂಡಿದ್ದಾರೆ. ಪತ್ನಿ ಜಯಶ್ರೀ, ಪುತ್ರ ಪ್ರಥಮ್ ಸುಖೀ ಸಂಸಾರ ನಡೆಸುತ್ತಿರುವ ವಿಶ್ವನಾಥ್ ಅವರು ಸಿನಿಮಾರಂಗದಲ್ಲಿ ಮತ್ತಷ್ಟು ಸಾಧನೆಯನ್ನು ಮಾಡಲಿ ಎಂಬುದು ನಮ್ಮ ಶುಭ ಹಾರೈಕೆ.