ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : ಸನಾತನ ನಾಟ್ಯಾಲಯ ಪ್ರಸ್ತುತ ಪಡಿಸುವ ಗುರು ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಇವರ ಶಿಷ್ಯೆ ವಿದುಷಿ ಸಿಂಚನಾ ಎಸ್. ಕುಲಾಲ್ ಇವರ ‘ಭರತನಾಟ್ಯ ರಂಗಪ್ರವೇಶ’ವು ದಿನಾಂಕ 12 ಅಕ್ಟೋಬರ್ 2025ರಂದು ಸಂಜೆ 5-00ಕ್ಕೆ ಮಂಗಳೂರಿನ ಪುರಭವನದಲ್ಲಿ ನಡೆಯಿತು.
ಕರ್ನಾಟಕ ಕಲಾತಿಲಕ ನಾಟ್ಯಾಚಾರ್ಯ ಶ್ರೀ ಉಳ್ಳಾಲ್ ಮೋಹನ್ ಕುಮಾರ್ ಇವರಿಂದ ದೇವತಾ ದೀಪ ಪ್ರಜ್ವಲನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಆಳ್ವಾಸ್ ನ ಡಾ. ಮೋಹನ್ ಆಳ್ವ ಮತ್ತು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಭರತನಾಟ್ಯ ಕಾರ್ಯಕ್ರಮದಲ್ಲಿಂ ನಟುವಾಂಗಂನಲ್ಲಿ ಗುರು ಶಾರದಾಮಣಿ ಶೇಖರ್, ಹಾಡುಗಾರಿಕೆಯಲ್ಲಿ ವಿನೀತ್ ಪುರವಂಕರ, ಮೃದಂಗದಲ್ಲಿ ರಾಜನ್ ಪಯ್ಯನೂರ್ ಮತ್ತು ಕೊಳಲು ನಿತೀಶ್ ಅಮ್ಮಣ್ಣಯ್ಯ ಇವರು ಸಹಕರಿಸಿದರು.
ಕ್ರೀಡಾಪಟುವಾಗಿದ್ದು ನೃತ್ಯದತ್ತ ಒಲವು ತೋರಿದ ಸಿಂಚನಾ ಪಾಂಡೇಶ್ವರ ಶಿವನಗರ ನಿವಾಸಿಗಳಾದ ಸದಾಶಿವ ಕುಲಾಲ್ ಮತ್ತು ಚಂದ್ರಪ್ರಭಾ ಕುಲಾಲ್ ದಂಪತಿಯ ಪುತ್ರಿ. ನಗರದ ಪ್ರೆಸಿಡೆನ್ಸಿ ಶಾಲೆಯಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಓದಿದ ಅವರು ಧರ್ಮಸ್ಥಳ ಮಂಜುನಾಥೇಶ್ವರ ವ್ಯವಹಾರ ಆಡಳಿತ ಕಾಲೇಜಿನಿಂದ ಈಚೆಗೆ ಬಿಬಿಎ ಪದವಿ ಗಳಿಸಿದ್ದಾರೆ. ಶಾಲಾ ದಿನಗಳಲ್ಲಿ ಈಜು ಮತ್ತು ಅಥ್ಲೆಟಿಕ್ಸ್ನಲ್ಲಿ ಸಾಧನೆ ಮಾಡಿದ್ದ ಎನ್ಎಸ್ಎಸ್ನಲ್ಲೂ ಸೇವೆ ಸಲ್ಲಿಸಿದ್ದಾರೆ.
ಮೂರನೇ ವಯಸ್ಸಿನಲ್ಲೇ ನೃತ್ಯ ಕಲಿಯತೊಡಗಿದ್ದ ಅವರು ಆರಂಭದಲ್ಲಿ ಚಕ್ರಪಾಣಿ ನೃತ್ಯಕಲಾ ಕೇಂದ್ರದ ಸುರೇಶ್ ಅತ್ತವರ್ ಅವರ ಶಿಷ್ಯೆ ಆಗಿದ್ದು ಜೂನಿಯರ್ ಪರೀಕ್ಷೆ ತೇರ್ಗಡೆ ಹೊಂದಿದ್ದರು. ಸನಾತನ ಸೇರಿದ ನಂತರ ಸೀನಿಯರ್ ಗ್ರೇಡ್ ತೇರ್ಗಡೆಯಾದರು. ಅತ್ಯುನ್ನತ ಶ್ರೇಣಿಯಲ್ಲಿ ‘ವಿದ್ವತ್’ ಗಳಿಸಿದರು. ಅಯೋಧ್ಯೆಯ ರಾಮಮಂದಿರ ಸೇರಿದಂತೆ ಹಲವು ವೇದಿಕೆಗಳಲ್ಲಿ ನೃತ್ಯ ಪ್ರದರ್ಶಿಸಿರುವ ಅವರು ಪ್ರಸಿದ್ಧ ಕಲಾವಿದರಾದ ರಮಾ ವೈದ್ಯನಾಥನ್, ಜಾನಕಿ ರಂಗರಾಜನ್, ಪಾರ್ಶ್ವನಾಥ್ ಉಪಾಧ್ಯೆ ಮುಂತಾದವರು ನಡೆಸಿಕೊಟ್ಟ ಕಾರ್ಯಾಗಾರಗಳಲ್ಲಿ ಪಾಲ್ಗೊಂಡಿದ್ದಾರೆ.
ರಾಷ್ಟ್ರದೇವೋಭವ, ಪುಣ್ಯಭೂಮಿ ಭಾರತ, ಸತ್ಯನಾಪುರತ ಸಿರಿ ಮತ್ತು ಪುಣ್ಯಲಹರಿ ಮುಂತಾದ ರೂಪಕಗಳ ಭಾಗವಾಗಿರುವ ಅವರು ಸದ್ಯ ಪ್ರದರ್ಶನ ನೀಡುವುದರ ಜೊತೆಯಲ್ಲಿ ಪಾಠವನ್ನೂ ಮಾಡುತ್ತಿದ್ದಾರೆ.