ಕುಲಾಲ ವರ್ಲ್ಡ್ ಡಾಟ್ ಕಾಮ್
ಚಿನ್ನಯ ಹಾಗೂ ತಿರುಮಲೆ ದಂಪತಿಯ ಪುತ್ರರಾಗಿರುವ ಇವರು ಬಂಟಾಳ್ವ ತಾಲೂಕಿನ ಅಮ್ಮೆಂಬಳದಲ್ಲಿ 1927ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಬಿಜೈಯಲ್ಲಿ ಹಾಗೂ ಹೈಸ್ಕೂಲ್ ಶಿಕ್ಷಣವನ್ನು ಕೆನರಾ ಹೈಸ್ಕೂಲಿನಲ್ಲಿ ಪೂರೈಸಿದ ಇವರು, ಕಂಕನಾಡಿಯಲ್ಲಿದ್ದ ಭತ್ತ ಸಂಶೋಧನಾ ಕೇಂದ್ರದಲ್ಲಿ ಕ್ಷೇತ್ರ ಸಹಾಯಕರಾಗಿ ಮತ್ತು ಬೆಸೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಕೆಲಕಾಲ ಉದ್ಯೋಗದಲ್ಲಿದ್ದರು. ನಂತರ ನವಭಾರತ ದಿನಪತ್ರಿಕೆಯ ಪ್ರಧಾನ ಕಚೇರಿಯಲ್ಲಿ ಉಪಸಂಪಾದಕರಾಗಿ ಸೇವೆ ಆರಂಭಿಸಿದರು. ನಂತರ ಪ್ರಜಾ ಸೋಶಿಯಲಿಸ್ಟ್ ಪಕ್ಷದಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡ ಇವರು, ಮಾಜಿ ಕೇಂದ್ರ ಸಚಿವ ಜಾರ್ಜ್ ಫೆರ್ನಾಂಡಿಸ್, ಅಮ್ಮೆಂಬಳ ಬಾಳಪ್ಪ, ಕೆ.ಆರ್.ಕಾರಂತರ ನಿಕಟ ಒಡನಾಡಿಯಾಗಿದ್ದರು.
1946ರಲ್ಲಿ ಹುಬ್ಬಳ್ಳಿಯಲ್ಲಿದ್ದ ಪಕ್ಷದ ರಾಜ್ಯ ಸಮಿತಿ ಪ್ರಧಾನ ಕಚೇರಿಯಲ್ಲಿ ಕಾರ್ಯದರ್ಶಿಯಾಗಿದ್ದರು. ರಾತ್ರಿ ಶಾಲೆಯ ಶಿಕ್ಷಕರಾಗಿ, ಧಾರವಾಡ ಜಿಲ್ಲಾ ಸಮಾಜವಾದಿ ಪಕ್ಷದ ಸಹಕಾರ್ಯದರ್ಶಿಯಾಗಿ ದುಡಿದಿದ್ದರು. ಕರ್ನಾಟಕ ವಿವಿಯ ಸೆನೆಟ್ ಸಿಂಡಿಕೇಟ್ ಸದಸ್ಯರಾಗಿದ್ದರು. ಚುಟುಕು ಬ್ರಹ್ಮ ದಿನಕರ ದೇಸಾಯಿ, ಕೆನರಾ ವೆಲ್ಫೇರ್ ಟ್ರಸ್ಟ್ ಮೂಲಕ ಅಂಕೋಲಾದಲ್ಲಿ ಆರಂಭಿಸಿದ ‘ಜನಸೇವಕ’ ರಾಜ್ಯಮಟ್ಟದ ವಾರ ಪತ್ರಿಕೆಯನ್ನು 1955ರಿಂದ 1962ರವರೆಗೆ ಸಂಪಾದಕರಾಗಿ ಮುನ್ನಡೆಸಿದರು. ನಂತರ ಅವರು ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವರದಿಗಾರರಾಗಿ ನಿವೃತ್ತರಾದರು. ‘ಜನಸೇವಕನ ನೆನಪಿನಂಗಳ’ ಇವ ಲೇಖನಗಳ ಸಂಕಲನವಾಗಿದೆ.
ಇವರಿಗೆ 2018ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1987ರ ಕರ್ನಾಟಕ ಪತ್ರಿಕಾ ಅಕಾಡೆಮಿ, 1996ರ ಖಾದ್ರಿ ಶಾಮಣ್ಣ ನೆನಪಿನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ. ಕೆನರಾ ಟ್ರಸ್ಟ್ನ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾಗಿ, ಮಾರ್ಗದರ್ಶಕರಾಗಿಯೂ ಸೇವೆ ಸಲ್ಲಿಸಿದರು. ತನ್ನ ಪತ್ನಿಯ ಅಗಲಿಕೆ ನಂತರ ಅವರು ಕಳೆದ 10-15ವರ್ಷಗಳಿಂದ ಮಣಿಪಾಲ ದಶರಥ ನಗರದಲ್ಲಿರುವ ಮಣಿಪಾಲ ಕೆಎಂಸಿಯ ನಿವೃತ್ತ ನರ್ಸ್ ಆಗಿರುವ ಮಗಳು ಭಾರತಿ ಅವರ ಮನೆಯಲ್ಲಿ ಜೀವನ ಕಳೆಯುತ್ತಿದ್ದಾರೆ.