ರಾಯಬಾಗ (ಕುಲಾಲ್ ವರ್ಲ್ಡ್ ಡಾಟ್ ಕಾಮ್): ಪಟ್ಟಣದ ಶ್ರೀ ಲಕ್ಷ್ಮೀಸೇನ ಶಿಕ್ಷಣ ಸಂಸ್ಥೆಯ ಹೊಸ ಸಂಯುಕ್ತ ಪದವಿಪೂರ್ವ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಅಣ್ಣಪ್ಪ ಸದಾಶಿವ ಕುಂಬಾರ ಅವರಿಗೆ ಈ ಬಾರಿ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.

ಸೆಪ್ಟೆಂಬರ್ 5 ರಂದು ಬೆಂಗಳೂರಿನಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಅಣ್ಣಪ್ಪ ಸದಾಶಿವ ಕುಂಬಾರ ಅವರು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ರಾಯಬಾಗ ಪಟ್ಟಣದ ಹೊಸ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಸಾಲಿನಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಶೇಕಡಾ 100 ರಷ್ಟು ಫಲಿತಾಂಶ ತಂದಿದ್ದಾರೆ.
ತಂತ್ರಜ್ಞಾನ ಆಧಾರಿತ ಕಲಿಕೆಯನ್ನು ಅಳವಡಿಸಿಕೊಳ್ಳುವುದರೊಂದಿಗೆ ಸಮುದಾಯದ ಸಹಭಾಗಿತ್ವದಲ್ಲಿ ಪರಿಸರ ಪ್ರಜ್ಞೆ ಸಂಬಂಧಿಸಿದ ಪೂರಕ ಕಾರ್ಯಕ್ರಮ ನಡೆಸಿರುತ್ತಾರೆ ಹಾಗೂ ಹಲವಾರು ಕಾರಣಗಳಿಂದ ಕಾಲೇಜಿನಿಂದ ಹೊರಗುಳಿದ ವಿದ್ಯಾರ್ಥಿಗಳನ್ನು ಶಿಕ್ಷಣ ವಾಹಿನಿಯಲ್ಲಿ ಮುಂದುವರಿಸಲು ಪ್ರೇರೇಪಣೆ ನೀಡಿರುತ್ತಾರೆ. ಈ ಹಿನ್ನಲೆಯಲ್ಲಿ ಅವರಿಗೆ ಈ ಬಾರಿ ರಾಜ್ಯ ಪ್ರಶಸ್ತಿ ಲಭಿಸಿದೆ.ಅಣ್ಣಪ್ಪ ಕುಂಬಾರ ಇವರನ್ನು ಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ದಶರಥ ಶೆಟ್ಟಿ, ಸದಸ್ಯರಾದ ಶೀತಲ ಬೇಡಕಿಹಾಳೆ, ಡಾ.ಅಜೀತ ನಾಯಿಕ, ಆಡಳಿತಾಧಿಕಾರಿ ಎ.ಟಿ.ಸವದತ್ತಿ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.

