ಚುನಾವಣೆಯಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಪರ ಕುಲಾಲ ಸಂಘ ಕೆಲಸ ಮಾಡುತ್ತದೆ: ದಿವಾಕರ ಮೂಲ್ಯ
ಬೆಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಬೆಂಗಳೂರು ಕುಲಾಲ ಸಂಘಕ್ಕೆ ನಿವೇಶನ ಮಂಜೂರು ಮಾಡುವ ಮೂಲಕ ನಮ್ಮ ಸಮುದಾಯದ ಪ್ರೀತಿಗೆ ಪಾತ್ರರಾದ ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ನಮ್ಮ ಸಮುದಾಯದ ಪೂರ್ಣ ಬೆಂಬಲವಿದ್ದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರಿನಲ್ಲಿ ಅಶೋಕ್ ರೈ ಪರ ನಾವು ಪ್ರಚಾರ ಕಾರ್ಯವನ್ನು ಮಾಡಲಿದ್ದೇವೆ ಎಂದು ಬೆಂಗಳೂರು ಕುಲಾಲ ಸಂಘದ ಅಧ್ಯಕ್ಷ ದಿವಾಕರ ಮೂಲ್ಯ ಹೇಳಿದ್ದಾರೆ.
ಅವರು ಬೆಂಗಳೂರಿನ ಜಗದ್ಗುರು ರೇಣುಕಾಚಾರ್ಯ ಕಾಲೇಜು ಸಭಾಂಗಣದಲ್ಲಿ ನಡೆದ ಬೆಂಗಳೂರು ಕುಲಾಲ ಸಂಘದ 55 ನೇ ವಾರ್ಷಿಕ ಮಹಾಸಭೆ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೆಂಗಳೂರಿನಲ್ಲಿ ಕಳೆದ 55 ವರ್ಷಗಳಿಂದ ನಮ್ಮ ಸಂಘ ಕಾರ್ಯಚರಿಸುತ್ತಿದೆ. ಕುಲಾಲ ಸಮುದಾಯದ ಶ್ರೇಯೋಭಿವೃದ್ದಿಗೆ ಅವಿರತ ಶ್ರಮವನ್ನು ಮಾಡುತ್ತಿದೆ. ಆರ್ಥಿಕವಾಗಿ ತೀರಾ ಹಿಂದುಳಿದ ಕುಲಾಲ ಸಮುದಾಯವನ್ನು ಆರ್ಥಿಕ ಮತ್ತು ಶೈಕ್ಷಣಿಕವಾಗಿ ಪ್ರಗತಿಯತ್ತ ಕೊಂಡೊಯ್ಯುವ ಉದ್ದೇಶದಿಂದ ಸಂಘ ಕೆಲಸ ಮಾಡುತ್ತಿದೆ. ನಮ್ಮ ಸಂಘದ ಕಾರ್ಯಚಟುವಟಿಕೆ ಮತ್ತು ಕುಲಾಲ ಸಂಸ್ಕೃತಿ ಮತ್ತು ವೈಭವಕ್ಕೆ ವೇದಿಕೆಯನ್ನು ಕಲ್ಪಿಸುವ ಉದ್ದೇಶದಿಂದ ನಾವು ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನಿವೇಶನಕ್ಕೆ ಮನವಿ ಮಾಡಿಕೊಂಡು ಬರುತ್ತಿದ್ದೇವೆ ಆ ಕನಸು ಈ ಬಾರಿ ಈಡೇರಿದೆ ಎಂದು ಹೇಳಿದರು.

ಕೊಟ್ಟ ಮಾತಿನಂತೆ ನಡೆದುಕೊಂಡ ಅಶೋಕ್ ರೈ
ನಮ್ಮ ಬೆಂಗಳೂರು ಕುಲಾಲ ಸಂಘಕ್ಕೆ ನಿವೇಶನವನ್ನು ಪಡೆಯಲು ನಾವು ಕಳೆದ 40 ವರ್ಷಗಳಿಂದ ವಿವಿಧ ಜನಪ್ರತಿನಿಧಿಗಳ ಮೂಲಕ ಮನವಿಯನ್ನು ಮಾಡಿಕೊಂಡು ಬಂದಿದ್ದೇವೆ ಆದರೆ ಎಲ್ಲರೂ ನಮಗೆ ಭರವಸೆಯನ್ನು ನೀಡಿದ್ದಾರೆ ವಿನ ನಿವೇಶನ ಮಾಡಿಕೊಡುವಲ್ಲಿ ಸಫಲರಾಗಲಿಲ್ಲ. ಕುಲಾಲ ಸಂಘದ ನಿವೇಶನದ ಬಗ್ಗೆ ಪುತ್ತೂರು ಶಾಸಕ ಅಶೋಕ್ ರೈ ಅವರನ್ನು ಭೇಟಿಯಾಗಿ ಕಳೆದ 6 ತಿಂಗಳ ಹಿಂದೆ ಮನವಿ ಮಾಡಿದ್ದೆವು. ಶಾಸಕರು ನಮ್ಮ ಸಂಘದ ಪ್ರಮುಖರನ್ನು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬಳಿ ಕರೆದುಕೊಂಡು ಹೋಗಿ ನಿವೇಶನ ವಿಚಾರವಾಗಿ ಮಾತುಕತೆ ನಡೆಸಿದ್ದರು, ಆ ಬಳಿಕ ಬೆಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎನ್ ಎ ಹ್ಯಾರಿಸ್ ಅವರ ಬಳಿಯೂ ಕರೆದುಕೊಂಡು ಹೋಗಿ ಮಾತುಕತೆ ನಡೆಸಿ ಸರಕಾರದ ವತಿಯಿಂದ ನಮ್ಮ ಸಂಘಕ್ಕೆ 14 ಸಾವಿರ ಚದರ ಅಡಿಯ ನಿವೇಶನವನ್ನು ಬೆಂಗಳೂರಿನ ಜಾಲಹಳ್ಳಿ ಬಿಡಿಎ ಲೇಔಟಿನಲ್ಲಿ ಮಂಜೂರು ಮಾಡಿದ್ದಾರೆ. ಇದು ನಮ್ಮ 45 ವರ್ಷಗಳ ಮಾಡಿದ ಹೋರಾಟದ ಪ್ರತಿಫಲವಾಗಿ ಪುತ್ತೂರು ಶಾಸಕರು ದೇವರಂತೆ ಬಂದು ನಮಗೆ ಸಹಾಯ ಮಾಡಿದ್ದಾರೆ ಅವರನ್ನು ಕುಲಾಲ ಸಮುದಾಯ ಎಂದೂ ಮರೆಯುವುದಿಲ್ಲ, ಅವರು ಮಾಡಿದ ಸಹಕಾರದಿಂದ ಕುಲಾಲ ಸಮುದಾಯದ ಕನಸು ನನಸಾಗಿದೆ ಎಂದು ಅಧ್ಯಕ್ಷ ದಿವಾಕರ ಮೂಲ್ಯ ಹೇಳಿದರು.
15 ದಿನ ಚುನಾವಣಾ ಪ್ರಚಾರ
- ನಮ್ಮ ಸಂಘಕ್ಕೆ ನಿವೇಶನ ಮಂಜೂರುಗೊಳಿಸುವ ಮೂಲಕ ಬೇಡಿಕೆ ಈಡೇರಿಸಿದ ಪುತ್ತೂರು ಶಾಸಕ ಅಶೋಕ್ ರೈ ಪರ ನಾವು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಾತೀತವಾಗಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದೇವೆ. ದ ಕ ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ಕುಲಾಲ ಸಮುದಾಯದ ಮಂದಿ ಶಾಸಕ ಅಶೋಕ್ ರೈ ಪರವಾಗಿ ಕೆಲಸ ಮಾಡಲಿದ್ದೇವೆ. ಯಾರಿದಂಲೂ ಮಾಡಲು ಸಾಧ್ಯವಿಲ್ಲದ ಕೆಲಸ ಮಾಡಿದ ಶಾಸಕ ಅಶೋಕ್ ರೈ ನಮ್ಮ ಸಮುದಾಯದ ಬೇಡಿಕೆ ಈಡೇರಿಸಿದ್ದಕ್ಕಾಗಿ ಅವರ ಮೇಲಿನ ಋಣ ನಮ್ಮಲ್ಲಿದೆ ಈ ಕಾರಣಕ್ಕೆ ನಾವು ಅಶೋಕ್ ರೈ ಗೆ ಬೆಂಬಲ ಸೂಚಿಸಲಿದ್ದೇವೆ ಎಂದು ಅಧ್ಯಕ್ಷ ದಿವಾಕರ ಮೂಲ್ಯ ಭರವಸೆ ನೀಡಿದ್ದಾರೆ.
ಕೊಟ್ಟ ಮಾತನ್ನು ಉಳಿಸಿದ್ದೇನೆ: ಅಶೋಕ್ ರೈ
ನನ್ನ ಬಳಿ ಬೆಂಗಳೂರು ಕುಲಾಲ ಸಂಘದ ಪ್ರಮುಖರು ಬಂದು ನಿವೇಶನದ ವಿಚಾರವನ್ನು ಹೇಳಿದ್ದರು. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಬಿಡಿಎ ಅಧ್ಯಕ್ಷ ಎನ್ ಎ ಹ್ಯಾರಿಸ್ ಅವರನ್ನು ಭೇಟಿಯಾಗಿ ಕುಲಾಲ ಸಂಘದವರ ಬೇಡಿಕೆ ಬಗ್ಗೆ ಚರ್ಚೆ ಮಾಡಿದ್ದೆ. ಸರಕಾರ ತಕ್ಷಣ ಅದನ್ನು ಮಾನ್ಯ ಮಾಡಿ 14 ಸಾವಿರ ಚ ಅ ವಿಸ್ತೀರ್ಣದ ನಿವೇಶನವನ್ನು ಒದಗಿಸಿದೆ. ನಿವೇಶನ ಮಂಜೂರು ಮಾಡಿಸಿಕೊಡುವೆ ಎಂದು ಮಾತುಕೊಟ್ಟಿದ್ದೆ ಅದರಂತೆ ನಡೆದುಕೊಂಡಿದ್ದೇನೆ. ಮುಂದೆ ಕುಲಾಲ ಸಮುದಾಯ ನನ್ನ ಜೊತೆ ನಿಲ್ಲಲಿದೆ ಎಂಬ ಭರವಸೆಯೂ ಇದೆ. ಚುನಾವಣೆ ಸಂದರ್ಭದಲ್ಲಿ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ ಇದಕ್ಕೆ ಅವರಿಗೆ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಸಂಘಕ್ಕೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ಶಾಸಕ ಅಶೋಕ್ ರೈ ತಿಳಿಸಿದರು.
ಕುಲಾಲ ಸಂಘದಿಂದ ಸನ್ಮಾನ
ನಿವೇಶನ ಮಂಜೂರುಗೊಳಿಸಿದ ಶಾಸಕರನ್ನು ಕುಲಾಲ ಸಂಘದ ಪರವಾಗಿ ಸನ್ಮಾನ ಮಾಡಲಾಯಿತು. ಮೈಸೂರು ಪೇಟ ತೊಡಿಸಿ, ಫಲಪುಷ್ಪ ಹಾರವನ್ನು ನೀಡಿ ಸನ್ಮಾನಿಸಿದರು.
ವೇದಿಕೆಯಲ್ಲಿ ಬೆಂಗಳೂರು ತುಳುಕೂಟದ ಅಧ್ಯಕ್ಷ ದಿನೇಶ್ ಹೆಗ್ಡೆ,ಚಿಕ್ಕಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ಎಸ್ ಶಿವಕುಮಾರ್, ಮುಂಬಯಿ ಜ್ಯೋತಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಗಿರೀಶ್ ಬಿ ಸಾಲಿಯಾನ್, ಮೈಸೂರು ಕುಲಾಲ ಸಂಘದ ಅಧ್ಯಕ್ಷ ಸುಕುಮಾರ ಕುಂಪಲ, ಕುಂದಾಪುರ ತಾಲೂಕು ಕುಲಾಲ ಸಂಘದ ಅಧ್ಯಕ್ಷ ರಾಘವೇಂದ್ರ ಹೆಮ್ಮಾಡಿ, ಸಿಂಗಾಪುರ ಉದ್ಯಮಿ ಮಹೇಶ್ ಕೃಷ್ಣಪ್ಪ, ಬೆಂಗಳೂರು ಕುಲಾಲ ಸಂಘದ ಉಪಾಧ್ಯಕ್ಷರುಗಳಾದ ವಿನೋದ್ಚಂದ್ರ ಗಿರಿ, ರಮನಾಥ್ ಏತಡ್ಕ, ಉಪಸ್ಥಿತರಿದ್ದರು. ಬೆಂಗಳೂರು ಕುಲಾಲ ಸಂಘದ ಪ್ರ,ಕಾರ್ಯದರ್ಶಿ ಆಶಾನಂದ ಕುಲಸೇಖರ ಸ್ವಾಗತಿಸಿದರು. ಕೋಶಾಧಿಕಾರಿ ರಮಾನಂದ ಕುಲಾಲ್ ವಂದಿಸಿದರು.


