ಉಡುಪಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಪುತ್ತೂರು ಶಾಸಕ ಆಶೋಕ್ ಕುಮಾರ್ ರೈ ಅವರು ಕಾಪು ಸಮೀಪದ ಕುತ್ಯಾರು ಗ್ರಾಮದ ನಿವಾಸಿ ಸತೀಶ್ ಕುಲಾಲ್ ಮತ್ತು ಸುಜಾತಾ ಕುಲಾಲ್ ಅವರ ಪುತ್ರ ಸಾಕ್ಷಾತ್ ಕುಲಾಲ್ ಅವರ ಕುರಿತು ಬರೆದ ಬರಹವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರಿಂದಲೂ ಪ್ರಶಂಸೆಯ ಸುರಿಮಳೆ ವ್ಯಕ್ತವಾಗಿದೆ.
ಉಡುಪಿಯ ಸಮಾರಂಭವೊಂದರಲ್ಲಿ ಸಿಕ್ಕಿದ ಹದಿಹರೆಯದ ಯುವಕ……
ಮದುವೆ ಗೃಹಪ್ರವೇಶ ಮುಂತಾದ ಖಾಸಗಿ ಸಮಾರಂಭಗಳಲ್ಲಿ ಪಾಲ್ಗೊಳ್ಳುವಾಗ ಬಹುತೇಕ ನನ್ನ ರಾಜಕೀಯವನ್ನು ಪಕ್ಕಕ್ಕೀಡುತ್ತೇನೆ. ಹಾಗಂತ ಅಲ್ಲೂ ಕೂಡಾ ನನ್ನ ಕಣ್ಣುಗಳು ಸುಮ್ಮನಿರುವುದಿಲ್ಲ… ಯಾವಾಗಲೂ ನನ್ನ ಸುತ್ತಮುತ್ತ ನಡೆಯುವ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇರುತ್ತದೆ…ಹೃದಯದಲ್ಲಿನ ಸಾಮಾಜಿಕ ಮಿಡಿತ ಕಡಿಮೆ ಆಗುವುದಿಲ್ಲ…. ಹೀಗಾಗಿಯೇ ಮೆದುಳು ಸದಾ ಜಾಗೃತವಾಗಿ ಕಾರ್ಯತತ್ಪರವಾಗಿರುತ್ತದೆ….
ಮೊನ್ನೆ ಉಡುಪಿಯಲ್ಲಿ ಇಂಥದ್ದೇ ಖಾಸಗಿ ಸಮಾರಂಭ ಒಂದರಲ್ಲಿ ಭಾಗವಹಿಸಲು ತೆರಳಿದ್ದೆ. ಮಾಮೂಲಿನಂತೆ ಕಾರ್ಯಕ್ರಮದಲ್ಲಿ ಇಷ್ಟಮಿತ್ರರನ್ನು, ಪರಿಚಯದವರನ್ನು ಭೇಟಿಯಾಗುವುದು, ಉಭಯ ಕುಶಲೋಪರಿ ವಿಚಾರಿಸುವುದು ಇತ್ಯಾದಿಗಳೆಲ್ಲ ಆದ ಬಳಿಕ ಆಪ್ತರ ಜೊತೆಗೂಡಿ ಭೋಜನವನ್ನೂ ಸವಿದೆ.
ಬಳಿಕ ಊಟ ಮಾಡಿದ ತಟ್ಟೆಯನ್ನು ಇಟ್ಟು ಕೈತೊಳೆಯಲೆಂದು ಹೊರಟಾಗ ಈ ಹುಡುಗ ನನ್ನ ಕಣ್ಣಿಗೆ ಬಿದ್ದ… ತೆಳ್ಳಗೆ ಬೆಳ್ಳಗೆ ಸ್ಪುರದ್ರೂಪಿಯಾಗಿದ್ದ ಹುಡುಗ ಅತಿಥಿಗಳು ಊಟ ಮಾಡಿದ ತಟ್ಟೆಗಳನ್ನು ಎತ್ತಿಕೊಂಡು ಹೋಗಿ ತೊಳೆಯುತ್ತಿದ್ದ…. ಯಾಕೋ ಆ ದೃಶ್ಯ ನೋಡಿ ಮನಸು ಭಾರವಾಯಿತು. ಯಾರು ಹೆತ್ತ ಮಗನೋ…. ಮನೆಯಲ್ಲಿ ಅದೆಂಥಾ ಕಷ್ಟವಿದೆಯೋ…. ಕಾಲೇಜು ಕಲಿಯುವ ವಯಸ್ಸಿನಲ್ಲಿ ಇಲ್ಲಿ ಬಂದು ಎಂಜಲು ತಟ್ಟೆ ತೊಳೆಯುತ್ತಿದ್ದಾನಲ್ಲಾ ಅನ್ನಿಸಿ ಮನಸಿಗೆ ಒಂಥರಾ ಕಸಿವಿಸಿ ಎನಿಸಿತು.
ಸೀದಾ ಆ ಹುಡುಗನ ಬಳಿಗೆ ಹೋಗಿ ಮಾತನಾಡಿಸಿದೆ…. ಅವನ ಹೆಸರು ಮನೆಯ ಪರಿಸ್ಥಿತಿ, ಕಷ್ಟಗಳ ಬಗ್ಗೆ ತಿಳಿದುಕೊಂಡೆ… ( ಆ ಬಗೆಗಿನ ವಿವರಗಳು ಇಲ್ಲಿ ಅನಗತ್ಯ ಅಂತ ಭಾವಿಸುತ್ತೇನೆ) ಅವನ ಮುಂದಿನ ಶಿಕ್ಷಣಕ್ಕೆ ಅದ್ಯಾವ ರೀತಿಯ ಸಹಾಯ ಬೇಕಾದರೂ ಮಾಡುತ್ತೇನೆ ಅನ್ನುವ ಭರವಸೆ ನೀಡಿ ಅವನ ಆತ್ಮವಿಶ್ವಾಸ ಹೆಚ್ಚಿಸುವ ರೀತಿಯಲ್ಲಿ ಮಾತನಾಡಿದೆ… ಹುಡುಗನ ಮುಖದಲ್ಲಿ ಆ ಕ್ಷಣ ಮೂಡಿದ ಮಂದಹಾಸವನ್ನು ನಾನ್ಯಾವತ್ತೂ ಮರೆಯಲಾರೆ….
ಆ ಹುಡುಗನಿಗೆ ನನ್ನ ಫೋನ್ ನಂಬರ್ ನೀಡಿ… ಅವನ ಜೊತೆಗೊಂದು ಫೋಟೋ ಕ್ಲಿಕ್ಕಿಸಿ ಮತ್ತೆ ಪುತ್ತೂರಿಗೆ ಹೊರಡಲು ಕಾರು ಹತ್ತಿದಾಗ ಮನಸಿಗೇನೋ ಒಂದು ರೀತಿಯ ತೃಪ್ತಿ….. ಸಮಾರಂಭದಲ್ಲಿ ಸ್ನೇಹಿತರ ಜೊತೆಗೆ ಸವಿದ ಭೋಜನಕ್ಕಿಂತಲೂ ಒಂದು ತೂಕ ಹೆಚ್ಚಿನ ತೃಪ್ತಿ….. ಆ ಚಿಗುರು ಮೀಸೆಯ ಯುವಕ ಯಾವತ್ತು ನನಗೆ ಕರೆ ಮಾಡುತ್ತಾನೋ ಎಂಬ ನಿರೀಕ್ಷೆಯಲ್ಲಿ…. ಅವನಿಗೆ ನನ್ನ ಕೈಯಲ್ಲಾದ ಸಹಾಯ ಮಾಡುವ ಅಪೇಕ್ಷೆಯಲ್ಲಿ……
ಆಶೋಕ್ ಕುಮಾರ್ ರೈ
ಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರ.