18 ವರ್ಷಗಳ ಕಾಲ ಚಾಚೂ ತಪ್ಪದೆ ತನ್ನ ಕಾರ್ಯವನ್ನು ಧೈರ್ಯದಿಂದ ಮುನ್ನಡೆಸುತ್ತಾ ಬಂದಿದ್ದಾರೆ ಸುಗುಣಾ ಮೂಲ್ಯ
ಪಡುಬಿದ್ರಿ(ಕುಲಾಲ ವರ್ಲ್ಡ್ ಡಾಟ್ ಕಾಮ್): ನಂದಿಕೂರು ಗ್ರಾಮದಲ್ಲಿ ಜನನ. ಬಾಮು, ಕಿಟ್ಟ ಮೂಲ್ಯ ದಂಪತಿಯ ಪುತ್ರಿ ಸುಗುಣಾ ಮೂಲ್ಯ ಅವರು ಓದಿದ್ದು ಪ್ರಾಥಮಿಕ ಶಾಲೆ. ಅವರಿಂದು ಪಡುಬಿದ್ರಿ ಗ್ರಾ.ಪಂ. ರುದ್ರಭೂಮಿಯ ನಿರ್ವಾಹಕಿ. ಪಂಚಾಯತ್ ಮೂಲಕ ವಹಿಸಿಕೊಂಡ ಕಾರ್ಯವನ್ನು ಗೌರವಯುತವಾಗಿ ಸುಗುಣಾ ನಿರ್ವಹಿಸುತ್ತಿದ್ದಾರೆ.
ಸುಗುಣಾ ಅವರು ಹಿಂದೆ ಪಡುಬಿದ್ರಿ ಗ್ರಾ. ಪಂ. ಸದಸ್ಯೆಯಾಗಿಯೂ ಜನ ಸೇವೆ ಮಾಡಿದವರು. ಆಗ ರುದ್ರ ಭೂಮಿ ನಿರ್ವಹಣೆಯನ್ನು ಆರಂಭಿಸಿದ ಸುಗುಣಾ, ಅಂದಿನಿಂದ ಇಂದಿನವರೆಗೆ ಸತತ 18 ವರ್ಷಗಳ ಕಾಲ ಚಾಚೂ ತಪ್ಪದೆ ತನ್ನ ಕಾರ್ಯವನ್ನು ಧೈರ್ಯದಿಂದ ಮುನ್ನಡೆಸುತ್ತಾ ಬಂದಿದ್ದಾರೆ. ಈ ತನ್ನ ಕಾರ್ಯಕ್ಕೆ ಧೈರ್ಯವೇ ಜೀವಾಳ ಎನ್ನುತ್ತಾರೆ ಅವರು.
ಪಂಚಾಯತ್ಗೆ ಶವದಹನ ಒಂದಕ್ಕೆ 150 ರೂ. ಗಳನ್ನು ಇವರು ಪಡೆಯುತ್ತಾರೆ. ಪಂಚಾಯತ್ ಮಾಹಿತಿಗಾಗಿ ಸಲ್ಲಬೇಕಾದ ಪ್ರತಿಯೊಂದು ಮಾಹಿತಿಯನ್ನು ಇವರು ಸಂಗ್ರಹಿಸುತ್ತಾರೆ. ಪ್ರತಿದಿನ ಬೆಳಗ್ಗೆ 6ರಿಂದ ರಾತ್ರಿ 8ಗಂಟೆಯವರೆಗೆ ದಹನ ಕ್ರಿಯೆಯಲ್ಲಿ ತಲ್ಲೀನರಾಗಿರುವ ಸುಗುಣಾ ಅವರಿಗೆ ಕಾರ್ಯದಲ್ಲಿ ತೃಪ್ತಿಯಿದೆ. ಮಾನವನ ಕಟ್ಟಕಡೆಯ ಯಾತ್ರೆಗೆ ಸಹಾಯಕಳಾಗಿ ಅವರು ಪಡುಬಿದ್ರಿ ಪಂಚಾಯತ್ ರುದ್ರಭೂಮಿಯಲ್ಲಿ ಒಂದಿನಿತೂ ಕೊರತೆ ಇರದಂತೆ ನೋಡಿಕೊಳ್ಳುತ್ತಿದ್ದಾರೆ. ಪಂಚಾಯತ್ ಇವರ ಈ ಕಾರ್ಯಕ್ಕೆ ವೇತನವನ್ನಾಗಲೀ, ಗೌರವ ಧನವನ್ನಾಗಲೀ ನೀಡುತ್ತಿಲ್ಲ. ಶವದಹನಕ್ಕೆ ಬರುವ ಸಾರ್ವಜನಿಕರು ಪ್ರೀತಿಯಿಂದ ನೀಡುವ ಸಂಭಾವನೆಯನ್ನಷ್ಟೇ ಅವರು ಪಡೆಯುತ್ತಾರೆ. ಇದಕ್ಕೆ ಯಾವ ಒತ್ತಾಯವಿಲ್ಲ.
ಕೃಪೆ: ಉದಯವಾಣಿ