ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಬಂಟ್ವಾಳ ಜೇಸಿಐ ಇದರ ವತಿಯಿಂದ ಸಾಮಾಜಿಕ ಚಟುವಟಿಕೆಯ ಸೇವೆಗಾಗಿ ನೀಡಲಾಗುವ `ಸಮಾಜ ರತ್ನ’ ಪ್ರಶಸ್ತಿಗೆ ಸಮಾಜಸೇವಕಿ, ನಿವೃತ್ತ ಪ್ರಥಮ ದರ್ಜೆ ಸಹಾಯಕಿ ಪಾಣೆಮಂಗಳೂರಿನ ಜಲಜಾಕ್ಷೀ ಕುಲಾಲ್ ಭಾಜನರಾಗಿದ್ದಾರೆ. ಬಂಟ್ವಾಳ ಬಂಟರ ಭವನದಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪಾಣೆಮಂಗಳೂರಿನ ಗೋಪಾಲ ಬಂಜನ್ ಹಾಗೂ ಚಂದುರವರ ಪುತ್ರಿಯಾಗಿರುವ ಜಲಜಾಕ್ಷೀ ಅವರು ಸೇವಾ ಅವಧಿಯಲ್ಲಿಯೇ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದೊಂದಿಗೆ ನಿಕಟ ಭಾಂದವ್ಯವಿರಿಸಿಕೊಂಡು ಸಂಘದ ಉಪಾಧ್ಯಕ್ಷೆಯಾಗಿ ದುಡಿಯುತ್ತಿದ್ದರು. ಸ್ವಯಂ ನಿವೃತ್ತಿ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ನಿವೃತ್ತಿದಾರರ ಸಂಘ (ರಿ) ಮಂಗಳೂರು ಇದರ ಕಾರ್ಯಕಾರಿ ಸಮಿತಿಯ ಸಕ್ರಿಯ ಸದಸ್ಯೆಯಾಗಿ, ಬಂಟ್ವಾಳ ತಾಲೂಕಿನ ಪಿಂಚಣಿದಾರರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ 2016ರಿಂದ ಕೋಶಾಧಿಕಾರಿಯಾಗಿಯೂ ಕೆಲಸ ಮಾಡಿಕೊಂಡಿರುತ್ತಾರೆ. ಬಂಟ್ವಾಳ ಕುಲಾಲ ಸುಧಾರಕ ಸಂಘದಲ್ಲಿ ಉಪಾಧ್ಯಕ್ಷೆಯಾಗಿ, ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿ, ಜೊತೆ ಕಾರ್ಯದರ್ಶಿ, ಸಾಂಸ್ಕೃತಿಕ ಕಾರ್ಯದರ್ಶಿ ಹಾಗೂ ಮಹಿಳಾ ಘಟಕದ ಅಧ್ಯಕ್ಷೆಯಾಗಿ ದುಡಿದ ಸಮಾಜ ಸೇವೆಯ ಅನುಭವ ಇವರಿಗಿದೆ.ದ.ಕ ಜಿಲ್ಲಾ ಸಹಕಾರಿ ಇಲಾಖಾಧಿಕಾರಿಗಳ ಸಹಕಾರಿ ಸಂಘದಲ್ಲಿ ನಿರ್ದೇಶಕಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ತುಳುನಾಡ ಪೊರ್ಲು ಸೇವಾ ಟ್ರಸ್ಟ್ ಬಂಟ್ವಾಳ ಹಾಗೂ ಕಾರುಣ್ಯ ನಿಧಿ ಸಂಗ್ರಹ ಸಮೂಹ ಕಾರ್ಕಳ ಈ ಗುಂಪಿನಲ್ಲಿ ಸಕ್ರಿಯವಾಗಿ ತೊಡಗಿ, ಬಡ ರೋಗಿಗಳಿಗೆ ಹಾಗೂ ಆರ್ಥಿಕ ಸಂಕಷ್ಟಕ್ಕೊಳಗಾದ ಅಬಲರಿಗೆ ಮನೆ ನಿರ್ಮಾಣಕ್ಕೆ ಕಿಂಚಿತ್ ಆರ್ಥಿಕ ಸಹಾಯ ನೀಡುವ ಮೂಲಕ ಅಳಿಲ ಸೇವೆಯನ್ನು ಮಾಡಿಕೊಂಡಿರುತ್ತಾರೆ.