ಕುಂದಾಪುರ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಯಕ್ಷಗಾನ ಅರ್ಥದಾರಿ ಕುಕ್ಕೆಹಳ್ಳಿ ಬೈಲುಬೀಡು ಮಹಾಬಲ ಶೆಟ್ಟಿ ಸಂಸ್ಮರಣಾ ಪ್ರಶಸ್ತಿಗೆ ಈ ಬಾರಿ ನಡುತಿಟ್ಟಿನ ಹಾರಾಡಿ ಶೈಲಿಯ ಹಿರಿಯ ಕಲಾವಿದ ಗಾವಳಿ ಶೀನ ಕುಲಾಲರು ಆಯ್ಕೆಯಾಗಿದ್ದಾರೆ. ಎರಡನೇ ವೇಷದಾರಿಗಳಿಗೆ ಬೇಕಾದ ನೀಳವಾದ ಆಳಂಗ, ಬಹುದೂರ ಕೇಳಿಸುವ ಕಂಠ, ಗಂಭೀರವಾದ ನಿಲುವು, ಸಾಂಪ್ರದಾಯಿಕವಾದ ಪಾತ್ರಗಳ ಕಟ್ಟೋಣದಿಂದ ಬಹುಬೇಗ ಪ್ರಧಾನ ವೇಷಧಾರಿಯಾಗಿ ಗುರುತಿಸಲ್ಪಟ್ಟವರು ಗಾವಳಿ ಶೀನ ಕುಲಾಲರು. ಪ್ರಶಸ್ತಿ ಪ್ರದಾನ ನ.30ರಂದು ಆದಿ ಉಡುಪಿಯಲ್ಲಿ ಪೆರ್ಡೂರು ಮೇಳದ ವೇದಿಕೆಯಲ್ಲಿ ನೆರವೇರಿತು. ಬಳಿಕ ಪೆರ್ಡೂರು ಮೇಳದವರಿಂದ ಮಾನಸಗಂಗಾ ಎಂಬ ಪ್ರಸಂಗದ ಪ್ರದರ್ಶನಗೊಂಡಿತು.
ನಡುತಿಟ್ಟಿನ ಹಿರಿಯ ಕಲಾವಿದ : ಬಯಲಾಟ ಮೇಳಗಳಲ್ಲಿ ಎರಡನೇ ವೇಷಧಾರಿಗಳಿಗೆ ಬೇಕಾದ ನೀಳವಾದ ಆಳಂಗ, ಬಹುದೂರ ಕೇಳಿಸುವ ಕಂಠ, ಗಂಭೀರವಾದ ನಿಲುವು, ಸಾಂಪ್ರದಾಯಿಕವಾದ ಪಾತ್ರಗಳ ಕಟ್ಟೋಣದಿಂದ ಬಹುಬೇಗ ಪ್ರಧಾನ ವೇಷಧಾರಿಯಾಗಿ ಬಯಲಾಟ ಮೇಳಗಳ ರಂಗಸ್ಥಳದಲ್ಲಿ ಗುರುತಿಸಲ್ಪಟ್ಟವರು ಗಾವಳಿ ಶೀನ ಕುಲಾಲರು.
ಕುಂದಾಪುರ ತಾಲೂಕಿನ ಶಿರಿಯಾರ-ಹಳ್ಳಾಡಿ ಪರಿಸರ ಯಕ್ಷಲೋಕಕ್ಕೆ ಘಟಾನುಘಟಿ ಕಲಾವಿದರನ್ನು ನೀಡಿದ ಗಂಡು ಮೆಟ್ಟಿನ ನೆಲ. ಇಂತಹ ಪರಿಸರದಲ್ಲಿ ಮೇರು ಕಲಾವಿದರಾದ ಶಿರಿಯಾರ ಮಂಜು ನಾಯಕ್, ಹಳ್ಳಾಡಿ ಮಂಜಯ್ಯ ಶೆಟ್ಟಿ, ಕೋಟ ವೈಕುಂಠ, ಮತ್ಯಾಡಿ ನರಸಿಂಹ ಶೆಟ್ಟಿ, ಹಳ್ಳಾಡಿ ಸುಬ್ರಾಯ ಮಲ್ಯ, ಮಜ್ಜಿಗೆಬೈಲು ಚಂದಯ್ಯ ಶೆಟ್ಟಿ ಮುಂತಾದ ಹಿರಿಯ ಕಲಾವಿದರ ಹತ್ತಿರದ ಒಡನಾಟದಿಂದ ಬೆಳೆದವರು ಕುಲಾಲರು. ಅಲ್ಲಿಗೆ ಸಮೀಪದ ಗಾವಳಿಯಲ್ಲಿ ಬಡಿಯ ಕುಲಾಲ್-ಕೊಲ್ಲು ಕುಲಾಲ್ತಿ ದಂಪತಿಗಳ ಪುತ್ರನಾಗಿ 1949ರಲ್ಲಿ ಜನಿಸಿದ ಇವರಿಗೀಗ ಎಪ್ಪತ್ತರ ಹರೆಯ.
ಎರಡನೇ ತರಗತಿ ವಿದ್ಯಾಭ್ಯಾಸಕ್ಕೆ ಓದು ನಿಲ್ಲಿಸಿದ ಅವರು ಬಡತನದಿಂದ ಸಂಕಟ ಪಡುತ್ತಿದ್ದ ಕುಟುಂಬ ನಿರ್ವಹಣೆಗಾಗಿ ಸ್ವಂತ ಪರಿಶ್ರಮದಿಂದ ಕಲಾವಿದನಾಗಿ ಬೆಳೆದವರು. ಗಾವಳಿ ಚಂದಯ್ಯ ಶೆಟ್ಟಿ, ಬಾಬು ಕುಲಾಲ್ ಮತ್ತು ಬಸವ ಕುಲಾಲರಿಂದ ವ್ಯವಸ್ಥಿತವಾದ ರಂಗವಿದ್ಯೆಯನ್ನು ಕರಗತ ಮಾಡಿಕೊಂಡ ಇವರು ಮಜ್ಜಿಗೆಬೈಲು ಚಂದಯ್ಯ ಶೆಟ್ಟರಿಂದ ಮಾತುಗಾರಿಕೆ ಕಲಿತರು. ಹೀಗೆ ಹಂತ ಹಂತವಾಗಿ ಹವ್ಯಾಸಿ ಕಲಾವಿದರಾಗಿ ಬೆಳೆದ ಇವರು ಶ್ರೀ ಮಾರಣಕಟ್ಟೆ ಮೇಳದಲ್ಲಿ ಒಡ್ಡೋಲಗ ವೇಷಧಾರಿಯಾಗಿ ಗೆಜ್ಜೆ ಕಟ್ಟಿದರು. ಬಳಿಕ ಕಮಲಶಿಲೆ. ಸೌಕೂರು ಸಾಲಿಗ್ರಾಮ, ಅಮೃತೇಶ್ವರಿ ಮೇಳದಲ್ಲಿ ಸೇವೆ ಸಲ್ಲಿಸಿ ಎರಡನೇ ವೇಷಧಾರಿಯಾಗಿ ಶ್ರೀ ಮಂದಾರ್ತಿ ಮೇಳಕ್ಕೆ ಸೇರ್ಪಡೆಯಾದರು. ಬಳಿಕ ಪೂರ್ಣ ಪ್ರಮಾಣದ ಎರಡನೇ ವೇಷಧಾರಿಯಾಗಿ ಹಾಲಾಡಿ, ಕಳುವಾಡಿ ಮುಂತಾದ ಮೇಳಗಳಲ್ಲಿ ಸೇವೆ ಸಲ್ಲಿಸಿದರು. ಶ್ರೀ ಮಂದಾರ್ತಿ ಮೇಳದಲ್ಲಿ ಮತ್ಯಾಡಿ ನರಸಿಂಹ ಶೆಟ್ಟಿ ಮತ್ತು ಹಾರಾಡಿ ಅಣ್ಣಪ್ಪ ಗಾಣಿಗರ ಭಾಗವತಿಕೆಯಲ್ಲಿ ಜಂಬೂರು ರಾಮಚಂದ್ರಯ್ಯ, ಅರಾಟೆ ಮಂಜುನಾಥ ಆಜ್ರಿ ಗೋಪಾಲ ಗಾಣಿಗ, ವಂಡಾರು ಬಸವ ಮುಂತಾದವರೊಂದಿಗೆ ಸಹ ಕಲಾವಿದರಾಗಿ ದುಡಿದ ಇವರ ಮುಂಡಾಸು ವೇಷಗಳು ರಂಗಸ್ಥಳವನ್ನು ತುಂಬುತ್ತಿದ್ದವು.
ಮುಂಡಾಸು ವೇಷದಾರಿಯಾಗಿ ಬಯಲಾಟ ರಂಗಸ್ಠಳಕ್ಕೆ ಅನುಪಮ ಸೇವೆ ಸಲ್ಲಿಸಿದ ಇವರ ರಾಮಾಂಜನೇಯದ ಶಕುಂತಕ, ಕೃಷ್ಣಾರ್ಜುನದ ಗಯಗಂಧರ್ವ, ಕೋಟೆಕರ್ಣ, ವೃಷಕೇತು, ಪ್ರದ್ಯುಮ್ನ. ಲೋಹಿತನೇತ್ರ, ವಿದ್ಯುನ್ಮಾಲಿ ಮುಂತಾದ ಸುಂದರವಾದ ಕೆಂಪು ಮತ್ತು ಕಪ್ಪು ಮುಂಡಾಸುಗಳು ನಡುತಿಟ್ಟಿಗೆ ಅವರ ಅಪೂರ್ವವಾದ ಕೊಡುಗೆಗಳು. ಎರಡನೇ ವೇಷಗಳಾದ ಕರ್ಣ, ಜಾಂಬವ, ಭೀಷ್ಮ, ರಾವಣ, ವೀರಮಣಿ, ಶನೀಶ್ವರ ಮಾತ್ರವಲ್ಲದೆ, ಪಾರ್ಟು ವೇಷಗಳಾದ ಕಂಸ, ಕಾಲನೇಮಿ, ಶುಂಭಾಸುರ, ಮುಂತಾದ ವೇಷಗಳು ಅಪಾರ ಜನಮನ್ನಣೆಗೆ ಪಾತ್ರವಾಗಿವೆ. ಜೋಡಾಟಗಳಲ್ಲಿ ಅವರ ಅಪೂರ್ವವಾದ ಮುಂಡಾಸು ವೇಷಗಳು ಜನಾಕರ್ಷಣೆಗೆ ಒಳಗಾಗಿವೆ.
ಶೀನ ಕುಲಾಲರ ಪ್ರತಿಭೆಗೆ ಅನೇಕ ಪ್ರಶಸ್ತಿ ಸನ್ಮಾನಗಳು ಸಂದಿವೆ. ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ, ಮುಂಬೈ ಕಲಾ ಪ್ರತಿಷ್ಟಾನ ಪ್ರಶಸ್ತಿ, ರಂಗಸ್ಥಳ ಪ್ರಶಸ್ತಿ ಸಹಿತ ಅನೇಕ ಸನ್ಮಾನಗಳು ಸಂದಿವೆ. ಸುದೀರ್ಘ 40 ವರ್ಷಗಳ ಕಾಲ ಬಯಲಾಟ ರಂಗಸ್ಥಳವನ್ನು ಶ್ರೀಮಂತಗೊಳಿಸಿದ ಅವರು ಕಾಲುನೋವಿನಿಂದ ರಂಗದಿಂದ ನಿರ್ಗಮಿಸಿದ್ದಾರೆ. ಪತ್ನಿ ನಾಲ್ಕು ಮಕ್ಕಳೊಂದಿಗೆ ಗಾವಳಿಯಲ್ಲಿ ವಾಸಿಸುತ್ತಿರುವ ಈ ಹಿರಿಯ ಕಲಾವಿದರಿಗೆ ಕಲಾಭಿಮಾನಿಗಳ ಪ್ರೋತ್ಸಾಹ ಬೇಕಾಗಿದೆ.
– ಪ್ರೊ| ಎಸ್.ವಿ.ಉದಯ ಕುಮಾರ ಶೆಟ್ಟಿ