ಸರ್ವಜ್ಞನನ್ನು ಒಂದು ರೀತಿ ಮರು ಅವಲೋಕನಕ್ಕೆ ಒಡ್ಡಬೇಕಾಗಿದೆ, ಮರು ಸ್ಥಾಪನೆ ಮಾಡಬೇಕಾಗಿದೆ. ಆತನನ್ನು ನಮ್ಮ ಜನಾಂಗದ ಚೌಕಟ್ಟಿನಲ್ಲಿ ಇಟ್ಟು ನೋಡಬೇಕಾಗಿದೆ, ಅವಲೋಕನ ಮಾಡಬೇಕಾಗಿದೆ ಮತ್ತು ಮರುದರ್ಶನ ಮಾಡಬೇಕಾಗಿದೆ. ಸರ್ವಜ್ಞನನ್ನು ಒಂದು ಜನಾಂಗದ ಚೌಕಟ್ಟಿನಲ್ಲಿ ಇಟ್ಟು ನೋಡುವುದು ಅಷ್ಟು ಸಂಜಸವಲ್ಲದಿದ್ದರೂ ಅದು ಇಂದು ನಮಗೆ ಅನಿವಾರ್ಯವಾಗಿದೆ. ಈ ಹಿಂದೆ ಮತ್ತು ಇಲ್ಲಿಯವರೆಗೂ ಪಟ್ಟಭದ್ರ ಹಿತಾಸಕ್ತಿಗಳು, ಪಟ್ಟಭದ್ರ ಜಾತಿಗಳು ಸರ್ವಜ್ಞನ ವಿಚಾರದಲ್ಲಿ ಇಲ್ಲಸಲ್ಲದ್ದನ್ನು ಸೃಷ್ಟಿಸಿ ಇದನ್ನು ಎಲ್ಲರೂ ಒಪ್ಪುವಂತೆ ಮತ್ತು ಒಪ್ಪಿಕೊಳ್ಳುವಂತೆ ಮಾಡಿಬಿಟ್ಟಿದ್ದಾರೆ. ಒಂದು ಕಡೆ ಜಿ.ಎಸ್.ಶಿವರುದ್ರಪ್ಪನವರು ವಾಸ್ತವವಾಗಿ ಅವನ ತಂದೆ–ತಾಯಿ ಹಾಗೂ ಗುರು ಸರ್ವಜ್ಞ ಹುಟ್ಟಿದ್ದು ಹೇಗೆ ಎಂಬುದನ್ನು ಹೇಳುವ ತ್ರಿಪದಿಗಳು ಯಾರೋ ಕಟ್ಟಿ ಸೇರಿಸಿದವುಗಳೆಂದು ಅಭಿಪ್ರಾಯಪಟ್ಟಿದ್ದಾರೆ. ಮುಂದುವರೆದು ಕುಂಬಾರ ಮಾಳಿಯಲ್ಲಿ ದ್ವಿಜೋತ್ತಮನೊಬ್ಬನಿಗೆ ಹುಟ್ಟಿದವನು ಸರ್ವಜ್ಞ ಎಂಬ ಕತೆಯಲ್ಲಿ ಈ ದೇಶದ ಪ್ರತಿಭೆಯೆಲ್ಲವೂ ಪ್ರತಿಷ್ಠಿತ ವರ್ಣದ ಬೀಜದ ಬೆಳಸು ಎಂಬ ಪರಂಪರಾಗತವಾದ ವರ್ಣಪ್ರತಿಷ್ಠೆಯ ಪ್ರಕ್ಷೇಪ ಇದು ಯಾಕಾಗಿರಬಾರದು ಎಂಬ ಪ್ರಬಲವಾದ ಸಂದೇಹ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸರ್ವಜ್ಞನ ಬದುಕಿನ ಬಗೆಗೆ ಏನೂ ತಿಳಿಯದೆ ಹೋಗಿರುವಾಗ ಅವನ ಜನನ, ತಂದೆ, ತಾಯಂದಿರ ವಿಚಾರವನ್ನು ಕುರಿತು ಹೇಳುವ ತ್ರಿಪದಿಗಳು ಮಾತ್ರ ಸತ್ಯವೆಂದು ನಂಬುವುದು ಹೇಗೆ ? ಉತ್ತಂಗಿ ಚನ್ನಪ್ಪನವರು 1927ರಲ್ಲಿ ಒಟ್ಟು 1928 ತ್ರಿಪದಿಗಳನ್ನು ಸಂಕಲನ ಮಾಡಿ ‘ಸರ್ವಜ್ಞನ ವಚನಗಳು’ ಎಂಬ ಸಂಪುಟವನ್ನು ಪ್ರಕಟಿಸಿದ್ದರು. ಇದರಲ್ಲಿ ಸುಮಾರು 1366 ಸರ್ವಜ್ಞನವೇ ಎಂಬುವುದರಲ್ಲಿ ಸಂಶಯವಿಲ್ಲವೆಂದೂ, ಸುಮಾರು 40–50 ಸಂಶಯಾಸ್ಪದವೆಂದೂ, ಉಳಿದ ಸುಮಾರು 500 ತ್ರಿಪದಿಗಳು ಖಚಿತವಾಗಿ ಅವನದವಲ್ಲವೆಂದು ಹೇಳಿದ್ದರು. ಮತ್ತೊಬ್ಬ ಸಂಶೋಧಕರಾದ ಮಾಳವಾಡರು ಸರ್ವಜ್ಞನೇ ರಚಿಸಿದ ತ್ರಿಪದಿಗಳ ಸಂಖ್ಯೆ ಈಗ ಒಟ್ಟಾರೆ ಪ್ರಕಟವಾದ ಪದ್ಯಗಳಿಗಿಂತ ಬಹುಮಟ್ಟಿಗೆ ಕಡಿಮೆ ಇರಬೇಕೆಂದು ಊಹಿಸಿದರೆ ತಪ್ಪಗಲಾರದು ಎಂದು ಅಂದೇ ಸಂಶಯ ವ್ಯಕ್ತಪಡಿಸಿದ್ದರು.
ಕಾಲಕಾಲಕ್ಕೆ ತ್ರಿಪದಿಗಳು ಸರ್ವಜ್ಞನ ಹೆಸರಿನಲ್ಲಿ ಪ್ರಕ್ಷಿಪ್ತವಾಗಿ ಅವು ಸಂಖ್ಯೆಯಲ್ಲಿ ಅಧಿಕವಾಗುತ್ತ ಬಂದವು. ಈ ಕ್ರಮದಲ್ಲಿ ನಿಜಪದ್ಯಗಳ ಸಂಖ್ಯೆಗೆ ಸರಿಸಮವಾಗಿ ಪ್ರಕ್ಷಿಪ್ತ ಪದ್ಯಗಳೂ ಬೆಳೆದು ಒಂದರೊಡನೊಂದು ಬೆರೆತು ಲೋಕದೃಷ್ಟಿಗೆ ಅವೆಲ್ಲವೂ ಸರ್ವಜ್ಞನವೇ ಎಂಬ ಭ್ರಾಂತಿಯನ್ನು ಹುಟ್ಟಿಸಿದವು. ಸರ್ವಜ್ಞನ ಜನನ ವೃತ್ತಾಂತವನ್ನೂ ಹೇಳುವ ಈ ತ್ರಿಪದಿಗಳು ಕೈಬರಹದ ಪ್ರತಿಗಳಲ್ಲಿ ಏಕರೂಪವಾಗಿ ಬಂದಿಲ್ಲ. ಇಲ್ಲಿ ಬ್ರಾಹ್ಮಣತ್ವವನ್ನು ಎಲ್ಲಿಂದಲೊ ತಂದು ತುರಿಕಿದವು ಎಂದು ಮೇಲನೋಟಕ್ಕೆ ಗೋತ್ತಾಗುತ್ತದೆ. ಸರ್ವಜ್ಞನೂ ತನ್ನ ಹುಟ್ಟಿನ ವೃತ್ತಾಂತದ ಬಗ್ಗೆ ಹೇಳುವ ತ್ರಿಪದಿ ಮತ್ತು ತನ್ನ ತಾಯಿ ಬಗ್ಗೆ ಹೇಳುವ ತ್ರಿಪದಿ ‘ಲಂಡೆ ಮಾಳ್ವೆಯೊಳು ಜನಿಸಿ’ ಎನ್ನುವ ಮತ್ತು ‘ಕುಂಬಾರಸಾಲೆಯಲ್ಲಿ ಇಂಬಿನ ಮೊಳಿಯೊಳು ಬಸವರಸ ನಿಂಬಿಟ್ಟನೆನ್ನ’ ಎಂದು ಹೇಳುವ ತ್ರಿಪದಿಗಳು ಸರ್ವಜ್ಞನನೇ ರಚಿಸಿದ ತ್ರಿಪದಿಗಳು ಎಂದು ಹೇಳಲು ಸಾಧ್ಯವಿಲ್ಲ. ತನ್ನ ತಂದೆ–ತಾಯಂದಿರ ಪ್ರಣಯದ ಸಂಗತಿಯನ್ನು ಮಗನಾದವನೂ ಹೇಳುವುದು ತೀರ ಅಸಂಭವವೆನ್ನಿಸುತ್ತದೆ. ತನ್ನ ತಾಯಿ ಬಗ್ಗೆ ಸರ್ವಜ್ಞ ಇಷ್ಟೊಂದು ಹೀನವಾಗಿ ಹೇಳಿದ್ದರೆ ಅವನು ಹೆಣ್ಣಿನ ಬಗ್ಗೆ ಇರುವ ಗೌರವವನ್ನು, ಪ್ರೀತಿಯನ್ನು ಹೋಂದಿರಲು ಹೇಗೆ ಸಾಧ್ಯ? ತನ್ನ ತಾಯಿ ನಡತೆ ಕೆಟ್ಟದ್ದು, ಅಂಸಪ್ರದಾಯಕವಾಗಿ ಹುಟ್ಟಿಸಿದಳು ಎಂದು ಹೇಳುವಾಗ
‘ನಡೆವುದೊಂದೆ ಭೂಮಿ! ಕುಡಿವುದೊಂದೆ ನೀರು
ಸುಡುವಗ್ನಿಯೊಂದೆ ಇರುತ್ತಿರಲು ಕುಲಗೋತ್ರ
ನಡುವೆ ಎತ್ತಣದು ಸರ್ವಜ್ಞ‘
ಇಂಥಹ ಅನೇಕ ಜಾತಿಯನ್ನು, ಕುಲ–ಗೋತ್ರವನ್ನು ಖಂಡಿಸಿ ಹೇಳುವ ತ್ರಿಪದಿಗಳನ್ನು ಹೇಗೆ ಬರೆಯಲು ಸಾಧ್ಯ? ಹಾಗಾದರೆ ಸರ್ವಜ್ಞನ ಜನ್ಮವೃತ್ತಾಂತ ಜಾತಿಗಳನ್ನು, ಕುಲವನ್ನು, ಗೋತ್ರಗಳನ್ನು ಮಿರಿದ್ದು ಅಲ್ಲವೆ? ತನ್ನ ಜನ್ಮ ವೃತ್ತಾಂತವನ್ನು ಖಂಡಿಸಿದ್ದಾದರೆ ಜಾತಿ–ಕುಲದ ಆಚಾರಣೆಯನ್ನು ಹೇಗೆ ಖಂಡಿಸಿದ ಎಂಬ ಅನೇಕ ಪ್ರಶ್ನೆಗಳು ಹುಟ್ಟುತ್ತವೆಲ್ಲವೇ ?
ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಹೇಳದ ವಿಷಯವಿಲ್ಲ ಎಂಬ ನಾಣ್ನುಡಿಯಂತೆ ಸರ್ವಜ್ಞನು ಈ ವಿಶ್ವದ ವಿಷಯಗಳನ್ನೆಲ್ಲ ಕ್ರೋಡಿಕರಿಸಿ ಹೇಳುವ ಪ್ರಯತ್ನ ಮಾಡಿದ್ದಾನೆ. ಸರ್ವಜ್ಞ ಎಂಬ ಶಬ್ದವೇ ಸೊಚಿಸುವಂತೆ ಅವನು ಎಲ್ಲ ಬಲ್ಲವನು. ವಿವಿಧ ಶಾಸ್ತ್ರಗಳಲ್ಲಿ ಪರಿಣಿತಿಯನ್ನು ಹೊಂದಿದ್ದ. ಆಳವಾದ ತತ್ವ ಚಿಂತನೆಗಳನ್ನು ಹೊಂದಿದ್ದ. ವೈದ್ಯಶಾಸ್ತ್ರ, ಆಹಾರಶಾಸ್ತ್ರ, ತಂತ್ರಜ್ಞಾನಶಾಸ್ತ್ರ, ಮನಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಧರ್ಮ, ಇತಿಹಾಸ, ವೈಚಾರಿಕತೆ ಹಾಗು ವೇದ–ಉಪನಿಷತ್ತುಗಳಲ್ಲಿ ಮತ್ತು ಮುಂತಾದ ವಿಷಯಗಳಲ್ಲಿ ಆಪಾರವಾದ ಜ್ಞಾನವನ್ನು ಪಡೆದಿದ್ದನು ಎಂಬುವುದನ್ನು ಅವನ ತ್ರಿಪದಿಗಳಿಂದ ತಿಳಿದು ಬರುತ್ತದೆ.
ವಿದ್ಯವುಳ್ಳವನ ಮುಖವು ಮುದ್ದು ಬರುವಂತಿಕ್ಕು
ವಿದ್ಯವಿಲ್ಲದವನ ಬರಿಮುಖವು ಹಾಳೂರ
ಹದ್ದಿಂತಿಕ್ಕೂ ಸರ್ವಜ್ಞ
ಎಂಬ ತ್ರಿಪದಿಯಲ್ಲಿ ಜ್ಞಾನದ ಮಹಾತ್ವವನ್ನು ಹೇಳಿದ್ದಾನೆ. ಜ್ಞಾನಿ ತನ್ನ ಮೌನದಿಂದ, ಮೂರ್ಖ ತನ್ನ ಮಾತಿನಿಂದ ಪ್ರಕಟಗೊಳ್ಳುತ್ತಾನೆ. ಸರ್ವಜ್ಞ ಸತ್ಯಸಾಕ್ಷತ್ಕಾರಕ್ಕಾಗಿ ಶುದ್ಧ ಜ್ಞಾನವನ್ನು ಸಂಪಾದಿಸುವವರನ್ನು ಇಷ್ಟಪಡುತ್ತಿದ್ದ. ಎಲ್ಲ ಜನರ ಲೇಸಗಾಗಿ ಅವನು ಒತ್ತಿ ಹೇಳುವ ಮೊದಲನೆಯ ಸಂಗತಿಯೆಂದರೆ ಗುರುವಿನ ಆವಶ್ಯಕತೆ. ಗುರುವಿಲ್ಲದೆ ಉದ್ದಾರವಿಲ್ಲ. ಗುರುವೇ ದೇವರೆಂದು ,ಗುರು ಸೇವೆಯಲ್ಲಿ ಮಾನವನ ಸಮಸ್ಯೆಗಳ ಏಕಮೇವ ಪರಿಹಾರವುಂಟೆಂದು ಅವನು ಮತ್ತೆ ಮತ್ತೆ ಘೋಷಿಸುವಾಗ ಹೇಗೆ ಸರ್ವರೊಳಗೊಂದು ವಿದ್ಯಕಲಿತ, ಹೇಗೆ ಹಿಂಡನ್ನಾಗಲಿದ ಗಜದಂತೆ ಊರು–ಊರು ಸುತ್ತಿ ಜ್ಞಾನಾರ್ಜನೆ ಮಾಡಿಕೊಂಡ. ಗುರುವಿನ ಬಗ್ಗೆ ಉದಾತ್ತವಾದ ಮನೋಭಾವನೆ ಹೊಂದಿರಬೇಕಾದರೆ , ಇಷ್ಟೆಲ್ಲ ಜ್ಞಾನ ಸಂಪಾದನೆಯಾಗಬೇಕಾದರೆ ಅವನಿಗೆ ಬಾಲ್ಯದಲ್ಲಿ ಒಳ್ಳೆಯ ವಾತವಾರಣ, ಉತ್ತಮವಾದ ಶಿಕ್ಷಣ ಸಿಕ್ಕಿರಲೇಬೇಕಲ್ಲವೆ? ಜ್ಞಾನಿಯಾದ ಒಬ್ಬ ಗುರುವಿನಿಂದ ಶಿಕ್ಷಣ ದೊರಕಿರಬೇಕಲ್ಲವೆ? ಶಿಕ್ಷಣದ ಭದ್ರವಾದ ಬುನಾದಿ ಬಾಲ್ಯದಲ್ಲೆ ಬಿದ್ದಿರಬೇಕು, ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ? ಎಂಬ ಗಾದೆಯಂತೆ ಅವನು ಯ್ವೌವನದಲ್ಲಿ ಅಥವಾ ಪ್ರೌಡದಲ್ಲಿ ಜ್ಞಾನ ಸಂಪಾದಿಸಲೂ ಸಾಧ್ಯವಿಲ್ಲ. ಅವನಿಗೆ ಬಾಲ್ಯದಲ್ಲಿಯೇ ಉತ್ತಮವಾದ ಶಿಕ್ಞಣ ಮತ್ತು ಉತ್ತಮವಾದ ತಂದೆ–ತಾಯಿಗಳು, ಒಳ್ಳೆಯ ವಾತವಾರಣ ಸಿಕ್ಕಿದ್ದರಿಂದಲೇ ಅವನು ಲೋಕ ಜ್ಞಾನಿಯಾಗಿದ್ದು. ಲೋಕ ಪ್ರಸಿದ್ದಿಯಾಗಿದ್ದು.
ಪಟ್ಟಭದ್ರಗಳ ಪ್ರಕಾರ ಬಾಲ್ಯದಲ್ಲಿಯೇ ಮನೆಯಿಂದ ಹೊರದಬ್ಬಿದ್ದರೆ ಅವನಿಗೆ ಉತ್ತಮವಾದ ಶಿಕ್ಷಣ ಪಡೆಯಲು ಸಾಧ್ಯವಿತ್ತೇ? ಅವತ್ತಿನ ಒಂದು ಸಂಪ್ರದಾಯಿಕ ಆಚರಣೆಯ ಕಾಲಘಟ್ಟದಲ್ಲಿ ಇವನು ಅಸಂಪ್ರದಾಯಕವಾಗಿ ಹುಟ್ಟಿದವನೆಂದು ಎಲ್ಲ ಕಡೆಗಳಿಂದ ಅವನನ್ನು ಹೊರದಬ್ಬಿಸಿಕೊಳ್ಳುತ್ತಿದ್ದ,. ಶೇಖರನ ವರದಿಂದ ಹುಟ್ಟಿದವನು ಎಂದು ಹೇಳುವ ಪಟ್ಟಭದ್ರಿಗಳು ಇಂಥಹ ವರದಿಂದ ಹುಟ್ಟಿದ ಮಗನನ್ನು ಯಾವ ತಾಯಿಂದಿರು ಹೊರದಬ್ಬುತ್ತಿದ್ದರೆ? ಅವನಲ್ಲಿ ಶಿವನನ್ನು ಕಂಡು ಅವನನ್ನು ಗೌರವದಿಂದ, ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರೇ ಹೊರತು ಬಾಲ್ಯದಲ್ಲಿಯೇ ಹೊರದಬ್ಬುತ್ತಿದ್ದರು ಎಂಬುವುದು ಎಷ್ಟು ಸುಳ್ಳೊ ಹಾಗೆಯೇ ಅವನ ಈ ಜನ್ಮವೃತ್ತಾಂತವೆಲ್ಲವೂ ಕಟ್ಟುಕಥೆಗಳೇ ಎನ್ನುವುದರಲ್ಲಿ ಸಂಶಯವಿಲ್ಲ.
ಸಂಶೋದಕರಾದ ವಿ.ರ ಕೊಪ್ಪಳ ಅವರು, ಉತ್ತಂಗಿ ಚೆನ್ನಪ್ಪನವರ ‘‘ಸರ್ವಜ್ಞ ವಚನಗಳ ಕಿರಿಯಾವೃತ್ತಿ’’ (1947)ಗೆ ಪ್ರಸ್ತಾವನೆ ಬರೆಯುತ್ತ ‘‘ಕುಂಬಾರ ಪಂಗಡಕ್ಕೆ ಮುಖಂಡನೆನಿಸಿ ಪಂಡಿತನೆನಿಸಿದ ಮಾಸೂರು ಬಸವರಸನು ದಕ್ಷಿಣದ ಕಾಶಿ ಎನಿಸಿದ ಹಂಪೆಯ ಈಶನಿಂದ ಮಕ್ಕಳ ವರ ಪ್ರಸಾದವನ್ನು ಪಡೆದುಕೊಂಡು ಅದನ್ನು ತವರೂರಿನಲ್ಲಿದ್ದ ಮಲ್ಲಮ್ಮನಿಗೆ ನೀಡಿದನ. ಅದರ ಫಲವಾಗಿ ಸರ್ವಜ್ಞನು ಜನಿಸಿದನು’’ ಎಂದು ಅಂದೇ ಅಭಿಪ್ರಾಯಪಟ್ಟಿದ್ದಾರೆ. ಮತ್ತೊಬ್ಬ ಸಂಶೋಧಕರಾದ ಮತ್ತು ಸರ್ವಜ್ಞನ ಜೀವನ ದೇಶಾದಿಗಳ ಬಗೆಗೆ ವಿಶೇಷವಾದ ಅಭ್ಯಾಸವನ್ನು ಮಾಡಿರುವ ಜಿ.ಎಂ. ಉಮಾಪತಿ ಶಾಸ್ತ್ರಿಗಳು ಮೈಸೂರು ಪ್ರಾಚ್ಯವಿದ್ಯಾ ಸಂಶೋಧನಾಲಯದ ಸರ್ವಜ್ಞನ ಕೈಬರಹವಾದ ಹೊತ್ತಿಗೆಯೊಂದರಲ್ಲಿರುವ ತ್ರಿಪದಿಯಾದ
‘‘ತಂದೆ ಕುಂಬಾರ ಮಲ್ಲ, ತಾಯಿ ಮಳಲಾದೇವ
ಇಂದು ಶೇಖರನ ವರಪುತ್ರ ಧರಣಿಗೆ ಬಂದು ಜನಿಸಿದ ಸರ್ವಜ್ಞ’’ ಎಂಬ ತ್ರಿಪದಿಯ ಆಧಾರದ ಮೇಲೆ ಹಾಗೂ ಇವನ ಬಹುತೇಕ ತ್ರಿಪದಿಗಳಲ್ಲಿ ಬಂದು ಸುಳಿಯುವ ಕುಂಬಾರ ಪದಗಳಿಂದ, ಕುಂಬಾರನ ಚಿತ್ರಣಗಳು ಹೆಚ್ಚು ಹೆಚ್ಚಾಗಿಬರುವುದರಿಂದ ಮತ್ತು ಈ ವಚನ ಅವನದೇ ಆಗಿರುವುದರಿಂದ ಈತ ಕುಂಬಾರ ದಂಪತಿಗಳ ಮಗನಾಗಿ ಹುಟ್ಟಿದನೆಂದು, ಕುಂಬಾರ ಮಲ್ಲಯ್ಯ ಮತ್ತು ಮಳಲಾದೇವಿಯರು ತಂದೆ–ತಾಯಿಗಳೆಂದು ಅಭಿಪ್ರಾಯಪಡುತ್ತಾರೆ. ಹಾಗೆಯೇ ಮುಂದುವರೆದು ಅವರು ಪುರಾತನ ಶಿವಶರಣ ಕುಂಬಾರ ಗುಂಡಯ್ಯನ ಕುಲದವನಾಗಿದ್ದಿರಬಹುದೆಂದು ಊಹಿಸಲು ಬರುವಂತಿದೆ ಎಂದೂ ‘ಸರ್ವಜ್ಞನು ಕುಂಬಾರ ದಂಪತಿಗಳಿಗೆ ಹುಟ್ಟಿದವನಾದರೂ ದೇವಸಾಲೆಯ ಮನೆತನದಲ್ಲಿ ಬೆಳೆದಿರುವುದು ಸಂಭಾವ್ಯವೆನಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಇಂಬುಕೊಡುವಂತೆ ಇವನ ತ್ರಿಪದಿಗಳಲ್ಲಿ ಇಷ್ಟಲಿಂಗ, ಷಟ್ಸ್ಥಲ, ಅಷ್ಟಾವರಣಾದಿಗಳನ್ನು ವಿವೇಚಿಸಿದ್ದಾನೆ, ಬಸವಾದಿ ಶರಣರ ವಿಚಾರಧಾರೆಯಿಂದ ಪ್ರಭಾವಿತನಾಗಿದ್ದಾನೆ.
ಜನಪದರ ಕಾವ್ಯಾಭಿವ್ಯಕ್ತಿ ಪ್ರಕಾರವೇ ತ್ರಿಪದಿ, ತನ್ನ ಜ್ಞಾನವನ್ನು, ಲೋಕಾನುಭವಗಳನ್ನು ವ್ಯಕ್ತಪಡಿಸಲು ತ್ರಿಪದಿಯನ್ನೇ ಬಳಸಿದ ಸರ್ವಜ್ಞ, ತ್ರಿಪದಿಗಳು ಕನ್ನಡ ಜನಮಾನಸದಲ್ಲಿ ನೆಲೆಯೂರಿದಷ್ಟು ಮತ್ತಾವ ಕವಿಯ ರಚನೆಗಳೂ ನೆಲೆಯೂರಿಲ್ಲ. ಒಳ್ಳೆಯದನ್ನು ಮೆಚ್ಚುವ, ಒಳಿತಲ್ಲದ್ದನ್ನು ನಿರ್ಭೀತಿಯಿಂದ ವಿಮರ್ಶಿಸುವ ಸಹಜವ್ಯಕ್ತಿತ್ವ ಹೊಂದಿದ್ದ ಸರ್ವಜ್ಞ ಕನ್ನಡದ ನಿಜವಾದ ಸಂತ. ಈ ಸಂತನ ಮೇಲೇರುವ ಜನ್ಮವೃತ್ತಾಂತದ ಬಗ್ಗೆ ಇರುವ ಕಟ್ಟುಕಥೆಯನ್ನು ಮತ್ತು ಅದರ ಅಪಪ್ರಚಾರವನ್ನು ಮೊದಲು ಖಂಡಿಸಬೇಕು. ಇದರ ಪ್ರಚಾರವನ್ನು ನಿಲ್ಲಿಸುವಂತೆ ಒತ್ತಾಯಿಸಬೇಕು.
ಬರಹ : ಕುಬೇರ ಕುಂಬಾರ
ಗ್ರಂಥ ಋಣ
1. ಸರ್ವಜ್ಞನ ಸಾಹಿತ್ಯ ಕುರಿತು ಅಧ್ಯಯನಗಳು….. ಸಂಪಾದಕ….ಡಾ. ವೀರೇಶ ಬಡಿಗೇರ…..ಕನ್ನಡವಿಶ್ವವಿದ್ಯಾಲಯ
2. ಸರ್ವಜ್ಞ: ತೌಲನಿಕ ಅಧ್ಯಯನಗಳು….ಸಂಪಾದಕ….ಡಾ. ಪಿ. ಮಹಾದೇವಯ್ಯ…..ಕನ್ನಡ ವಿಶ್ವವಿದ್ಯಾಲಯ
3. ಸರ್ವಜ್ಞನ ವಚನಗಳು……..ಸಂಪಾದಕ…ಡಾ. ಎಲ್. ಬಸವರಾಜು
4. ಪರಮಾರ್ಥ (ಸರ್ವಜ್ಞನ ವಚನಗಳು)…..ಸಂಪಾದಕ…ಡಾ. ಎಲ್. ಬಸವರಾಜು
5. ಸರ್ವಜ್ಞಮೂರ್ತಿಯ ವಚನಗಳು…….ಸಂಪಾದಕ….ಜಿ.ಎಂ, ಉಮಾಪತಿ ಶಾಸ್ತ್ರಿ



