ವಿದ್ಯಾರ್ಥಿಗಳಿಗೆ ಉತ್ತಮ ಗುಣಗಳನ್ನು ಮೈಗೂಡಿಸಿಕೊಳ್ಳಲು ಉದ್ಯಮಿ ಸುಧಾಕರ ಶೆಟ್ಟಿ ಸಲಹೆ
ಕುಂದಾಪುರ : “ಸ್ವಜಾತಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುವ ನಿಟ್ಟಿನಲ್ಲಿ ಇಂದು ತಮ್ಮ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಗಳನ್ನು ನೀಡಿ ಪ್ರೋತ್ಸಾಹಿಸಲಾಗುತ್ತಿದೆ , ಸಮಾಜದ ಮುಖ್ಯ ವಾಹಿನಿಯಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಕೆಲಸವಾಗಬೇಕು ಅದರ ಮೂಲಕ ಸಂಘದ ಹೆಸರನ್ನು ಮತ್ತು ಹೆತ್ತವರ ಹೆಸರನ್ನು ಎತ್ತಿ ಹಿಡಿಯುವ ಕೆಲಸವಾಗಬೇಕು ಆಗ ಇಂದು ಈ ವಿದ್ಯಾರ್ಥಿವೇತನವನ್ನು ಪಡೆದಿರುವುದಕ್ಕೆ ಒಂದು ಅರ್ಥ ಸಿಗುತ್ತದೆ, ಪೋಷಕರು ಮಕ್ಕಳಲ್ಲಿ ಉತ್ತಮ ಗುಣಗಳನ್ನು ಬೆಳೆಸುವ ಮೂಲಕ ಸಮಾಜದಲ್ಲಿ ತಮ್ಮ ಮಕ್ಕಳು ಉತ್ತಮ ಕೆಲಸಗಳನ್ನು ಮಾಡಿ ಸಮಾಜದಿಂದ ಗುರುತಿಸಿಕೊಳ್ಳುವ ಕೆಲಸ ಮಾಡಬೇಕು” ಎಂದು ಉದ್ಯಮಿ ಸುಧಾಕರ ಶೆಟ್ಟಿ ಹೇಳಿದರು.
ಅವರು ಹೊಂಬಾಡಿ-ಮಂಡಾಡಿಯ ಕುಲಾಲ ಸಮುದಾಯ ಭವನದಲ್ಲಿ ನಡೆದ ಕುಲಾಲ ಸಮಾಜ ಸುಧಾರಕರ ಸಂಘ(ರಿ.)ಕುಂದಾಪುರ ಇದರ 25 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾನಿಧಿ ಉದ್ಘಾಟನೆ ಮಾಡಿ ಮಾತನಾಡಿದರು.
ಕುಂದಾಪುರ ಕುಲಾಲ ಸಮಾಜ ಸುಧಾರಕ ಇದರ ಅದ್ಯಕ್ಷ ಎಂ. ನಿರಂಜನ ಅಸೋಡು ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧರು, ಮುಖ್ಯ ಅತಿಥಿಗಳಾಗಿ ವಿಧಾನಸಭೆ ಮಾಜಿ ಜಂಟಿ ಕಾರ್ಯದರ್ಶಿ , ಮಾಜಿ ಡೆಪ್ಯೂಟು ರಿಜಿಸ್ಟಾರ್ ರಾಜೀವ್ಗಾಂಧಿ ವಿಶ್ವವಿದ್ಯಾಲಯ , ಮಾಜಿ ಅಧ್ಯಕ್ಷರು ಕುಲಾಲ ಸಮಾಜ ಸುಧಾರಕ ಸಂಘ (ರಿ.) ಬೆಂಗಳೂರು ಇದರ ಕೃಷ್ಣಪ್ಪ ಕಣ್ವತೀರ್ಥ ಹಾಗೂ ಯುವ ಘಟಕದ ಅಧ್ಯಕ್ಷ ತೇಜಸ್ವಿರಾಜ್, ಡಾ| ಅಣ್ಣಯ್ಯ ಕುಲಾಲ್, ಮಹಿಳಾ ಘಟಕದ ಅಧ್ಯಕ್ಷೆ ಪ್ರತಿಮಾ ವಿನೋದ್ ಕುಮಾರ್ ಉಪಸ್ಥಿತರಿದ್ಧರು.
ಸಂಘದ ಸ್ಥಾಪಕಾದ್ಯಕ್ಷ ಕುಲಾಲ ರತ್ನ ಡಾ| ಎಂ.ವಿ. ಕುಲಾಲ್ ಸ್ವಾಗತ ಮಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು, ನೂಜಿ ರಾಜು ಕುಲಾಲ ನಿರೂಪಣೆ ಮಾಡಿ, ವಕ್ವಾಡಿ ರಾಜೀವ ಕುಲಾಲ್ ವರದಿ ವಾಚನ ಮಾಡಿ, ನಾಲ್ತೂರು ರಾಜೀವ ಕುಲಾಲ್ ಲೆಕ್ಕ ಪತ್ರ ಮಂಡನೆ ಮಾಡಿ, ಆಜ್ರಿ ಸುರೇಶ್ ಕುಲಾಲ್ ಧನ್ಯವಾದಗೈದರು.
ಯಕ್ಷಗಾನ ಸಾಧಕರಾದ ಜೋಗು ಕುಲಾಲ್ ಹಾಗೂ ನಾಗೇಶ ಕುಲಾಲ್ ನಾಗರಕೊಡಿಗೆ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಬಳಿಕ ಕುಲಾಲ ಸಮಾಜದ ಕಲಾವಿದರಿಂದ `ಶಿವ ಪಂಚಾಕ್ಷರಿ ಮಹಿಮೆ’ ಯಕ್ಷಗಾನ ಕಾರ್ಯಕ್ರಮ ನಡೆಯಿತು.
ವರದಿ : ಸತೀಶ್ ಕುಲಾಲ್ ನಡೂರು












