ಬಂಟ್ವಾಳ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಬೆಂಗಳೂರು ವಿಶ್ವವಿದ್ಯಾಲಯದ 2022-24ನೇ ಸಾಲಿನ ಶಿಕ್ಷಣ ಸ್ನಾತಕೋತ್ತರ ವಿಭಾಗದಲ್ಲಿ ಮೂಲತ ಬಂಟ್ವಾಳ ತಾಲೂಕಿನ ನೈನಾಡು ನಿವಾಸಿ ಚೇತನಾ ಅವರು ನಾಲ್ಕು ಚಿನ್ನದ ಪದಕಗಳನ್ನು ಗೆದ್ದು ಪ್ರಥಮ ರ್ಯಾಂಕ್ ಪಡೆದಿದ್ದಾರೆ.
ಈಚೆಗೆ ಬೆಂಗಳೂರು ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ 60ನೇ ವಾರ್ಷಿಕ ದೀಕ್ಷಾಂತ ಸಮಾರಂಭದಲ್ಲಿ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಪದಕಗಳನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಕುಲಸಚಿವ ಡಾ. ಎಸ್.ಎಂ. ಜಯಕಾರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಚೇತನಾ ಅವರು ಈ ಕಾರ್ಯಕ್ರಮದಲ್ಲಿ ಒಟ್ಟು ನಾಲ್ಕು ಚಿನ್ನದ ಪದಕಗಳನ್ನು ಪಡೆದು ಗೌರವಕ್ಕೆ ಪಾತ್ರರಾಗಿದ್ದಾರೆ.
ಮೂಲತ: ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ನೈನಾಡಿನ ಶಿವಪ್ಪ ಮೂಲ್ಯ-ಪುಷ್ಪಾವತಿ ದಂಪತಿಯ ಸುಪುತ್ರಿಯಾಗಿರುವ ಚೇತನಾ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುತ್ತಾರೆ.
ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಮೈಸೂರು ಇಲ್ಲಿ ಶಿಕ್ಷಣ ವಿಷಯಕ್ಕೆ ಸಂಬಂಧಿಸಿದಂತೆ ಪಿಎಚ್.ಡಿ. ಪದವಿಯನ್ನು ಮುಕ್ತ ಗಂಗೋತ್ರಿ ಕ್ಯಾಂಪಸ್ನ ಸಹ ಪ್ರಾಧ್ಯಾಪಕರಾದ ಡಾ. ಕೃಷ್ಣಪ್ಪ ಅವರ ಮಾರ್ಗದರ್ಶನದಲ್ಲಿ ಮುಂದುವರಿಸುತ್ತಿದ್ದಾರೆ.
ಚೇತನಾ ರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಿಲಾತಬೆಟ್ಟು ಗ್ರಾಮದ ನೈನಾಡು ಸಂತ ಜೋಸೆಫ್ ಅನುದಾನಿತ ಶಾಲೆ, ಪ್ರೌಢ ಶಿಕ್ಷಣವನ್ನು ಸರ್ಕಾರಿ ಪ್ರೌಢಶಾಲೆ ನೈನಾಡು, ಕಾಲೇಜು ಶಿಕ್ಷಣವನ್ನು ವಾಮದಪದವು ಹಾಗೂ ಸ್ನಾತಕೋತ್ತರ (ರಸಾಯನಶಾಸ್ತ್ರ) ಪದವಿಯನ್ನು ಮಂಗಳೂರು ವಿಶ್ವವಿದ್ಯಾಲಯ, ಕೊಣಾಜೆಯಲ್ಲಿ ಪೂರ್ಣಗೊಳಿಸಿದ್ದಾರೆ. ಅವರು ಪತಿ ಕರುಣಾಕರ್ ಕುಲಾಲ್ ಮತ್ತು ಮಕ್ಕಳೊಂದಿಗೆ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.



