ನನ್ನ ಕಾಲೇಜಿನ ಸಹಪಾಠಿಯಾಗಿದ್ದ ಆಕೆಯ ಹೆಸರು- ಪ್ರೀತಿ! ರೂಪು, ಲಾವಣ್ಯದಲ್ಲಿ ರಂಭೆ- ಊರ್ವಶಿಯರನ್ನು ಮೀರಿಸುವಷ್ಟು ಸೌಂದರ್ಯವತಿ. ಓದಿನಲ್ಲಿ ಸಾಕಷ್ಟು ಚುರುಕಾಗಿದ್ದ ಆಕೆ ಎಲ್ಲರೊಂದಿಗೆ ಸರಳವಾಗಿ, ಸಹಜವಾಗಿ ಒಡನಾಡುವ ಗುಣವೇ ನನ್ನನ್ನು ಇನ್ನಿಲ್ಲದಂಗೆ ಕುತೂಹಲಕ್ಕೀಡುಮಾಡಿತ್ತು. ಕಾಲೇಜಿನಲ್ಲಿ ಆಗಾಗ ನಡೆಯುತ್ತಿದ್ದ ಭಾಷಣ, ಹಾಡುಗಾರಿಕೆ, ಚರ್ಚಾಸ್ಪರ್ಧೆಗಳಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಿದ್ದ ಆಕೆಯೊಳಗಿನ ಜೀವನೋತ್ಸಾಹ ಯಾರಿಗಾದರೂ ಹೊಟ್ಟೆಕಿಚ್ಚು ಬರಿಸುವಂತಿತ್ತು.
ಆ ದಿನ, ನನ್ನೆದುರು ಬಂದು ನಿಂತು, ನಿನ್ನ ನೆನಪೊಂದೇ ಸಾಕೆನಗೆ… ಎಂದು ಹೇಳಿಹೋದ ಆಕೆಯ ರೂಪು ಈಗಲೂ ನನ್ನ ಕಣ್ಮುಂದೆ ಬಂದಾಗಲೆಲ್ಲ ಹೃದಯ ಆರ್ದ್ರವಾಗುತ್ತದೆ! ಮರುಘಳಿಗೆಯಲ್ಲಿ ನನ್ನ ಸುತ್ತಲೂ ನಿರ್ವಾತವೊಂದು ಆವರಿಸಿ, ನನಗೆ ಸಂಬಂಧಿಸಿದ ಎಲ್ಲವೂ ಖಾಲಿಯಾದಂತೆನಿಸಿದ್ದೇ ಎದೆ ಸೀಳುವ ನೋವಿನ ಎಳೆಯೊಂದು ನನ್ನೊಳಗೆ ಸಳಸಳನೆ ಹರಿದಾಡಿದಂಗಾಗುತ್ತದೆ. ಆಗಲೇ, ಇದ್ದಕ್ಕಿದ್ದಂಗೆ ಆಕೆಯೇ ನನ್ನ ಎದುರು ಬಂದು ನಿಂತಂಗಾಗಲು ಊರಾಚೆ ಇರೋ ಆ ಬೆಟ್ಟದ ಬುಡದಲ್ಲಿ, ಸುರಿವ ಹಾಲಿನಂಥ ಬೆಳದಿಂಗಳಲ್ಲಿ ನಾವಿಬ್ಬರೂ ಸೇರಿ ಸುಳಿದಾಡಿದ ಆ ಮಧುರ ನೆನಪುಗಳೆಲ್ಲವೂ ಹಸಿಹಸಿಯಾಗಿಯೇ ಮೈಮನಗಳಲ್ಲಿ ತುಂಬಿಕೊಳ್ಳುತ್ತವೆ. ಹೀಗೆ,
ನನ್ನನ್ನು ಇಡಿಯಾಗಿ ಆವರಿಸಿಕೊಂಡಿದ್ದ ಆಕೆ ನನ್ನೆಲ್ಲ ಆಸೆೆ, ಆಕಾಂಕ್ಷೆ ಮತ್ತು ನಿರೀಕ್ಷೆ ಗಳನ್ನು ಹುಸಿಯಾಗಿಸಿ ಶೂನ್ಯದಲ್ಲಿ ಲೀನವಾಗಿ ಹೋಗಿರುವ ಈ ಹೊತ್ತಲ್ಲಿ ನನ್ನಲ್ಲಿ ಉಳಿದಿರುವ ಆಕೆಯ ಕುರಿತಾದ ಅಸ್ತಿತ್ವದ ಕುರುಹು ಎಂದರೆ ಆಕೆ ಕೊಟ್ಟ ಆ ನವಿಲುಗರಿ!
ಆ ದಿನಗಳಲ್ಲಿ ನನ್ನ ಕಾಲೇಜಿನ ಸಹಪಾಠಿಯಾಗಿದ್ದ ಆಕೆಯ ಹೆಸರು- ಪ್ರೀತಿ! ರೂಪು, ಲಾವಣ್ಯದಲ್ಲಿ ರಂಭೆ- ಊರ್ವಶಿಯರನ್ನು ಮೀರಿಸುವಷ್ಟು ಸೌಂದರ್ಯವತಿ. ಓದಿನಲ್ಲಿ ಸಾಕಷ್ಟು ಚುರುಕಾಗಿದ್ದ ಆಕೆ ಎಲ್ಲರೊಂದಿಗೆ ಸರಳವಾಗಿ, ಸಹಜವಾಗಿ ಒಡನಾಡುವ ಗುಣವೇ ನನ್ನನ್ನು ಇನ್ನಿಲ್ಲದಂಗೆ ಕುತೂಹಲಕ್ಕೀಡುಮಾಡಿತ್ತು. ಕಾಲೇಜಿನಲ್ಲಿ ಆಗಾಗ ನಡೆಯುತ್ತಿದ್ದ ಭಾಷಣ, ಹಾಡುಗಾರಿಕೆ, ಚರ್ಚಾಸ್ಪರ್ಧೆಗಳಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಿದ್ದ ಆಕೆಯೊಳಗಿನ ಜೀವನೋತ್ಸಾಹ ಯಾರಿಗಾದರೂ ಹೊಟ್ಟೆಕಿಚ್ಚು ಬರಿಸುವಂತಿತ್ತು. ಆದರೆ, ನಾನು ಮಾತ್ರ ಇದಕ್ಕೆ ವ್ಯತಿರಿಕ್ತವಾದ ಸ್ವಭಾವದವನಾಗಿದ್ದೆ. ಸದಾ ಮೌನಿಯಾಗಿರುತ್ತಿದ್ದ ನಾನು, ಈ ಲೋಕದ ಸಂಗತಿಗಳಿಗೆಲ್ಲ ನನ್ನ ಆಂತರ್ಯದಲ್ಲೇ ಮಾತು ಕೊಡುವ ಗುಣವನ್ನು ರೂಢಿಸಿಕೊಂಡಿದ್ದೆ. ಅಂತೆಯೇ, ಆಗಾಗ ಕವಿತೆಗಳನ್ನು ಗೀಚುತ್ತಿದ್ದ ನಾನು, ಆ ಕವಿತೆಗಳನ್ನು ಗೆಳೆಯರ ಮುಂದೆ ವಾಚನ ಮಾಡಿ ಭೇಷ್… ಎನಿಸಿಕೊಳ್ಳುತ್ತಿದ್ದೆ. ಜತೆಗೊಂದಿಷ್ಟು ಕವಿತೆಗಳು ಪತ್ರಿಕೆಗಳಲ್ಲಿ ಆಗಾಗ ಪ್ರಕಟವಾಗುತ್ತಿದ್ದುದ್ದರಿಂದ ಕಾಲೇಜಿನಲ್ಲಿ ಗೆಳೆಯರೆಲ್ಲರೂ ನನ್ನನ್ನು ವಿಶೇಷ ವ್ಯಕ್ತಿಯೆಂಬಂತೆ ನೋಡುತ್ತಿದ್ದರು. ಬಹುಶಃ ಈ ಕಾರಣವಾಗಿಯೇ ನಾನು ಪ್ರೀತಿಯನ್ನು ಆಕರ್ಷಿಸಿದ್ದೆನೇನೋ, ಆಕೆ ಯಾರಲ್ಲೂ ತೋರದ ವಿಶೇಷ ಕಾಳಜಿಯನ್ನು ನನ್ನಲ್ಲಿ ತೋರುತ್ತಿದ್ದಳು. ನನ್ನನ್ನು ಕವಿತೆ ಬರೆಯುವಂತೆ ಪ್ರೇರೆಪಿಸುತ್ತಿದ್ದಳು. ನಾನು ಹೀಗೆಯೇ ಇರಬೇಕೆಂದು ಬಯಸುತ್ತಿದ್ದಳು. ನಾನೂ ಅಷ್ಟೇ… ಆಕೆಯ ಪ್ರೇರಣೆಯಿಂದಾಗಿಯೇ ನನ್ನ ಸುತ್ತಲಿನ ಲೋಕದ ಸಂಗತಿಗಳನ್ನು ವಿಭಿನ್ನ ನೆಲೆಯಲ್ಲಿ ಗ್ರಹಿಸಿ, ಆ ಗ್ರಹಿಕೆಗಳನ್ನು ಕವಿತೆಯಾಗಿಸುವುದನ್ನು ಉಸಿರಾಗಿಸಿಕೊಂಡೆ. ಹೀಗೆ, ಆಕೆಯ ಪ್ರೇರಣೆಯಿಂದಾಗಿಯೇ ನನಗರಿವಿಲ್ಲದಂತೆಯೇ ಲೋಕದ ಸಂಗತಿಗಳಿಗೆ ಕಣ್ಣಾಗತೊಡಗಿದೆ. ಈ ಹೊತ್ತು, ನಾನು ಕವಿಯಾಗಿ ಗುರುತಿಸಿಕೊಂಡಿರುವುದರ ಹಿಂದಿನ ಕಾರಣ ಮತ್ತು ಕ್ರಿಯೆ ಎಲ್ಲವೂ- ಪ್ರೀತಿ! ಈ ಪ್ರೀತಿ, ಸದಾ ನನ್ನೊಡನೆ ಒಡನಾಡುತ್ತಲೇ ನನ್ನೊಳಗೆ ಜೀವನೋತ್ಸಾಹ ತುಂಬಿದಳು. ಆಕೆ, ನನ್ನೊಳಗೆ ಬೆರೆತು ಅದೆಷ್ಟೋ ಬೆಳದಿಂಗಳ ರಾತ್ರಿಗಳಲ್ಲಿ ಕಾವ್ಯವಾಗಿ ಹರಿದಳು. ನನ್ನೊಂದಿಗೆ ಪ್ರೀತಿ ಇಲ್ಲದ ಈ ಹೊತ್ತಲ್ಲಿ, ಅಂದು ಆಕೆಯ ಸಮ್ಮುಖದಲ್ಲಿ ನನ್ನ ಬದುಕು ಅದೆಷ್ಟು ಸುಂದರವಾಗಿತ್ತು ಎಂದೆನಿಸುತ್ತದೆ!
ನಮ್ಮಿಬ್ಬರ ವಿಚಾರದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿರುವಾಗಲೇ ರಕ್ತ ಕ್ಯಾನ್ಸರ್ಗೆ ಬಲಿಯಾದ ಆಕೆ ಸಾಗರದಷ್ಟು ಮಧುರ ನೆನಪುಗಳನ್ನು ನನ್ನೊಳಗೆ ಉಳಿಸಿ ಹೋಗಿದ್ದಾಳೆ. ಈಗ, ದಿನವೂ ಪ್ರೀತಿಯ ನೆನಪುಗಳಲ್ಲೇ ಕಳೆದುಹೋಗುವ ಕೆಲಸ ನನ್ನದು! ಅಂದು, ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳುವಾಗ, ನಿನ್ನ ನೆನಪೊಂದೇ ಸಾಕೆನಗೆ… ಎಂದು ಆಕೆ ಹೇಳಿ ಹೋಗುವಾಗ ನನ್ನ ಕೈಗಿಟ್ಟ ಆ ನವಿಲುಗರಿ ಈಗಲೂ ನನ್ನ ಬಳಿ ಕಾಪಿಟ್ಟುಕೊಂಡಿರುವೆ!



